‘ತಾಳಿ ಕಟ್ಟಲಾ?’: ಮದುವೆಗೂ ಮುನ್ನ ವಧುಗಳ ಒಪ್ಪಿಗೆ ಕೇಳುವ ಹೊಸ ಟ್ರೆಂಡ್ ವೈರಲ್; ಪುರುಷರ ಹೆಚ್ಚಿದ ಆತಂಕಕ್ಕೆ ಕನ್ನಡಿ
ಇತ್ತೀಚಿನ ದಿನಗಳಲ್ಲಿ ಪುರುಷರು ಮದುವೆ ಎಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಕೆಲ ತಿಂಗಳಿನಿಂದ ಯುವತಿಯರು ಗಂಡನನ್ನು ಕೊಲ್ಲುವುದು, ಲವರ್ ಜೊತೆ ಸೇರಿ ಅಪರಾಧ ಮಾಡುವುದು, ಮದುವೆ ಬೇಡ ಎಂದು ಹೇಳದೇ ಮದುವೆಯಾದ ಮೇಲೆ ಆತನನ್ನು ಮುಗಿಸುವುದು, ಹನಿಮೂನ್ಗೆ ಕರೆದುಕೊಂಡು ಹೋಗಿ ಅಲ್ಲಿಯೇ ಕೊ*ಲೆ ಮಾಡುವುದು ಇವೆಲ್ಲವೂ ಮಾಮೂಲು ಎನ್ನುವಂತಾಗಿಬಿಟ್ಟಿದೆ. ಅದರಲ್ಲಿಯೂ ಈಚೆಗೆ ನಡೆದ ಮೇಘಾಲಯ ಹನಿಮೂನ್ ದುರಂತದ ಬಳಿಕ ಯಾವ ಹೆಣ್ಣನ್ನೂ ನಂಬದ ಸ್ಥಿತಿಗೆ ತಲುಪಿದ್ದಾರೆ ಗಂಡುಮಕ್ಕಳು. ಹಿಂದೆ ಕೊ*ಲೆ, ದೌರ್ಜನ್ಯ ಎಂದರೆ ಅದು ಹೆಣ್ಣಿನ ಮೇಲೆ ಎಂದಷ್ಟೇ ಬಿಂಬಿತವಾಗಿತ್ತು. ಮದುವೆಯಾದ ಹೆಣ್ಣು ಅತ್ತೆ ಮನೆಯಲ್ಲಿ ಎಷ್ಟು ಸುರಕ್ಷಿತ ಎನ್ನುವುದು ಈಗಲೂ ಪ್ರಶ್ನಾರ್ಹವಾಗಿಯೇ ಉಳಿದಿದೆ ಎನ್ನುವುದು ಬೇರೆ ಬಿಡಿ. ಆದರೆ ಗಂಡಿಗೆ ಈಗ ಸಾವಿನ ಭೀತಿ ಶುರುವಾಗಿದೆ.
ಇದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಮದುವೆಗಳು ವೈರಲ್ ಆಗುತ್ತಿದ್ದು, ಯಾವುದಕ್ಕೂ ಇರಲಿ ಎಂದು ಮದುಮಗ ವಧುವಿಗೆ ತಾಳಿ ಕಟ್ಟುವ ಮೊದಲು ತಾಳಿ ಕಟ್ಟಲಾ ಎಂದು ಕೇಳುವುದು ಮಾಮೂಲಾಗಿದೆ. ಇದೊಂದು ರೀತಿಯಲ್ಲಿ ಟ್ರೆಂಡ್ ಆಗಿ ಬೆಳೆದಿದೆ. ಈಗ ಇಲ್ಲೊಂದು ಅಂಥದ್ದೇ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕೂಡ ಮದುಮಗ ಹೆಣ್ಣಿಗೆ ಓಕೆನಾ ಎಂದು ತಾಳಿ ಕಟ್ಟುವ ಮುನ್ನ ಕೇಳಿದಾಗ, ಅದಕ್ಕೆ ಮದುಮಗಳು ಭಾವುಕಳಾಗಿದ್ದಾಳೆ. ಮದುಮಗನ ಈ ಮಾತಿಗೆ ಹಾಗೂ ಆತನ ನಡವಳಿಕೆಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಮದುಮಗಳು ಕೂಡ ಅಷ್ಟೇ ಭಾವುಕಳಾಗಿ ಓಕೆ ಎಂದಿರುವುದು ಕೂಡ ಎಲ್ಲರ ಗಮನ ಸೆಳೆದಿದೆ.
ಇಂಥದ್ದೇ ಹಲವು ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ನೋಡಿದರೆ, ಓಕೆನಾ, ತಾಳಿ ಕಟ್ಟಲಾ ಎಂದೆಲ್ಲಾ ಮದುಮಗ ಸನ್ನೆಯ ಮೂಲಕವೇ ತೋರಿಸುವುದನ್ನು ನೋಡಬಹುದಾಗಿದೆ. ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಕಷ್ಟ ಎನ್ನುವ ಮಾತೇ ಇದೆಯಲ್ವಾ? ಅದಕ್ಕಾಗಿ ಯಾವುದಕ್ಕೂ ಇರಲಿ ಎಂದುಕೊಂಡು ಗಂಡುಮಕ್ಕಳು ಹೀಗೆ ಮಾಡುವುದೇ ಬೆಸ್ಟ್ ಎನ್ನುವ ಹಲವು ಕಮೆಂಟ್ಗಳನ್ನು ನೋಡಬಹುದು. ಇಷ್ಟು ಮಾಡಿದ ಮೇಲೂ, ಮದುಮಗಳು ಓಕೆ ಎಂದು ತಾಳಿ ಕಟ್ಟಿಸಿಕೊಂಡ ಮೇಲೂ ಅವಳು ಸರಿಯಾಗಿಯೇ ಇರುತ್ತಾಳೆ ಎನ್ನುವುದು ಯಾವ ಗ್ಯಾರೆಂಟಿ ಎಂದು ಇನ್ನೂ ಕೆಲವರು ಇನ್ನೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮೇಘಾಲಯ ಹನಿಮೂನ್ ದುರಂತದ ಕುರಿತು ಹೇಳುವುದಾದರೆ, ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ ಸೋನಮ್ ರಘುವಂಶಿ ಸೇರಿದಂತೆ ಇತರ ಆರೋಪಿಗಳನ್ನು ಶಿಲ್ಲಾಂಗ್ನಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಸೊಹ್ರಾಗೆ ಕರೆತಂದು, ಭಾರೀ ಭದ್ರತೆಯ ನಡುವೆ ಅಪರಾಧದ ಸ್ಥಳವನ್ನು ಮರುಸೃಷ್ಟಿಸಿದ್ದಾರೆ. ಈ ಮರುಸೃಷ್ಟಿ ತನಿಖೆ ವಾಸ್ತವವಾಗಿ ಸ್ಥಳದಲ್ಲಿ ಏನಾಯಿತು ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ. ಕೊಲೆಗೆ ಬಳಸಲಾದ ಎರಡನೇ ಮಚ್ಚನ್ನು ಸಹ ಎಸ್ಡಿಆರ್ಎಫ್ ವಶಪಡಿಸಿಕೊಂಡಿದೆ ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ತಿಳಿಸಿದ್ದಾರೆ. ಮೇ 23 ರಂದು ವೈಸಾವ್ಡಾಂಗ್ ಜಲಪಾತದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ರಾಜಾ ರಘುವಂಶಿ ಅವರನ್ನು ಕಡಿದು ಕೊಲೆ ಮಾಡಿ, ಅವರ ಶವವನ್ನು ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ಸೊಹ್ರಾ ಪ್ರದೇಶದ ಹತ್ತಿರದ ಕಮರಿಯಲ್ಲಿ ಎಸೆಯಲಾಗಿತ್ತು ಎಂದು ಅವರು ಹೇಳಿದ್ದಾರೆ.