ಬೆಂಗಳೂರಿನಲ್ಲಿ ಮರ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಅಕ್ಷಯ್ ಬ್ರೈನ್ ಡೆಡ್: ಬಿಬಿಎಂಪಿ ವಿರುದ್ಧ ಬಿಲ್ ಕಟ್ಟದ ಆರೋಪ

ಬೆಂಗಳೂರು: ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಗಾಳಿ ಮಳೆಯಿಂದ ಮರದ ಕೊಂಬೆ ಮುರಿದು ಬಿದ್ದು ಗಾಯಗೊಂಡಿದ್ದ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಬೈಕ್ ಸವಾರ ಅಕ್ಷಯ್ (Bike Rider Akshay) ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಕ್ಷಯ್ ದೇಹ ಚಿಕಿತ್ಸೆ ಸ್ಪಂದಿಸುತ್ತಿಲ್ಲ ಎನ್ನಲಾಗ್ತಿದೆ. ವೈದ್ಯರು 0.1% ಅಷ್ಟೇ ಭರವಸೆ ಕೊಟ್ಟಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ.
ಸರ್ಜರಿ ಆಗಿ 48 ಗಂಟೆ, ಅಕ್ಷಯ್ ಬ್ರೈನ್ ಡೆಡ್
ಮರದ ಕೊಂಬೆ ಬಿದ್ದು ಆಸ್ಪತ್ರೆ ಸೇರಿದ ಅಕ್ಷಯ್ ಬ್ರೈನ್ ಡೆಡ್ ಆಗಿದ್ದು, ಜೂನ್ 15ರಂದು ಅಕ್ಷಯ್ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಸರ್ಜರಿ ಬಳಿಕ ಅಕ್ಷಯ್ ಆರೋಗ್ಯದ ಬಗ್ಗೆ ಯಾವುದೇ ಭರವಸೆ ಇಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ ಎನ್ನಲಾಗಿದೆ. ಸರ್ಜರಿ ನಡೆದ 48 ತಾಸುಗಳ ನಂತರವೂ ಮೆದುಳು ಸ್ಪಂದಿಸದಿದ್ದರೆ ಬ್ರೈನ್ ಡೆಡ್ ಎಂದು ಪರಿಗಣಿಸಲಾಗುತ್ತೆ ಎಂದು ಆಸ್ಪತ್ರೆಯ ಉನ್ನತ ಮೂಲ ತಿಳಿಸಿದೆ ಎನ್ನಲಾಗ್ತಿದೆ.
0.1 ಪರ್ಸೆಂಟ್ ಮಾತ್ರ ಭರವಸೆ
ಈಗ ಸರ್ಜರಿ ನಡೆದು 60 ತಾಸು ಕಳೆದಿದ್ದು ಅಕ್ಷಯ್ ಮೆದುಳು ಸ್ಪಂದಿಸಿಲ್ಲ. ಹೀಗಾಗಿ ಬ್ರೈನ್ ಡೆಡ್ ಆಗಿದೆ ಎಂದು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಯಾವುದೇ ಭರವಸೆ ಇಲ್ಲ.. ಚಿಕ್ಕ ವಯಸ್ಸಿರುವ ಕಾರಣಕ್ಕೆ ಒಂದು ಚಾನ್ಸ್ ತಗಳ್ಳೋಣ ಎಂದಿರುವ ವೈದ್ಯರು, ಕೇವಲ 0.1 ಪರ್ಸೆಂಟ್ ಮಾತ್ರ ಭರವಸೆ ಕೊಟ್ಟಿದ್ದಾರೆ ಎಂದು ಅಕ್ಷಯ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆ ಬಿಲ್ ಕಟ್ಟಿಲ್ವಾ ಬಿಬಿಎಂಪಿ!
ಮರ ಬಿದ್ದು ಗಾಯಗೊಂಡ ಅಕ್ಷಯ್ ಅವರ ಚಿಕಿತ್ಸೆ ಬಿಲ್ ಲಕ್ಷ ಲಕ್ಷ ದಾಟಿದೆ. ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ತನ್ನ ಹಳೆಯ ಚಾಳಿಯನ್ನ ಮತ್ತೆ ಮುಂದುವರೆಸಿದ್ದು, ಆಸ್ಪತ್ರೆ ಬಿಲ್ ಕಟ್ಟಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಮಾತಾಡಿದ ಅಕ್ಷಯ್ ಅಣ್ಣ ಬೆನಕರಾಜ್, ಸರ್ಜರಿಗೆ ಹಣ ಹೊಂದಿಸಲು ಪರದಾಡುತ್ತಿರೋದಾಗಿ ಹೇಳಿಕೊಂಡಿದ್ದಾರೆ.
ಅಕ್ಷಯ್ ಕುಟುಂಬಸ್ಥರು ಗಂಭೀರ ಆರೋಪ
ಇದುವರೆಗೂ ಆಸ್ಪತ್ರೆಯಲ್ಲಿ ಅಕ್ಷಯ್ ಬಿಲ್ ಅನ್ನು ಪಾಲಿಕೆ ಕ್ಲಿಯರ್ ಮಾಡಿಲ್ಲ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಆಸ್ಪತ್ರೆಯವರು ನಿಜ ಹೇಳ್ತಿಲ್ವೇನೋ ಎಂದು ಅಕ್ಷಯ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಬಿಲ್ ಕಟ್ತಿಲ್ಲ, ಆಸ್ಪತ್ರೆಯವರು ನಿಜ ಹೇಳ್ತಿಲ್ಲ ಎಂದು ಅಕ್ಷಯ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.