ಬೆಂಗಳೂರು: ಮನೆ ಕೆಲಸದಾಕೆಯಿಂದ ₹67 ಲಕ್ಷ ಕಳ್ಳತನ, ಖತರ್ನಾಕ್ ಕಳ್ಳಿ ಉಮಾ ಬಂಧನ

ಬೆಂಗಳೂರು: ಕೆಲಸ ಕೊಟ್ಟ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳಿಯನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರದ ಗಾಳಿಪುರದ ನಿವಾಸಿ ಉಮಾ (43) ಬಂಧಿತ ಆರೋಪಿ. ಈಕೆ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ರೂ.67 ಲಕ್ಷ ನಗದು ಹಾಗೂ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದಳು.
ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿ ಈಕೆಯಿಂದ 57.50 ಲಕ್ಷ ನಗದು, ರೂ.12.65 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಾಮರಾಜಪೇಟೆಯ ನಿವಾಸಿ, ಉದ್ಯಮಿ ರಾಧಾ ಅವರು ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ರಾಧಾ ಅವರು ನಗರ್ತಪೇಟೆಯಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿ ಸುಜಾತಾ ಅವರ ಆರೈಕೆಗೆಂದು ಮೂರು ತಿಂಗಳ ಹಿಂದೆ ಆರೋಪಿ ಉಮಾ ಅವರನ್ನು ನೇಮಕ ಮಾಡಿಕೊಂಡಿದ್ದರು. ತಿಂಗಳಿಗೆ ರೂ.23 ಸಾವಿರ ಸಂಬಳ ನಿಗದಿಪಡಿಸಿದ್ದರು.
ರಾಧಾ ಅವರು ಎರಡು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ತಮ್ಮ ನಿವೇಶನವನ್ನು ಮಾರಾಟ ಮಾಡಿದ್ದರು. ಆ ಹಣವನ್ನು ಬೀರುವಿನಲ್ಲಿ ಇಟ್ಟಿದ್ದರು. ಇದೇ ಬೀರುವಿನಲ್ಲಿ 1 ಕೆ.ಜಿ 415 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ಕೆ.ಜಿ 445 ಗ್ರಾಂ ತೂಕದ ಬೆಳ್ಳಿಯ ತಟ್ಟೆ, ಚೊಂಬು ಹಾಗೂ ಕಪ್ ಗಳನ್ನು ಇಟ್ಟಿದ್ದರು. ಇವೆಲ್ಲವನ್ನೂ ಉಮಾ ಕಳವು ಮಾಡಿದ್ದರು.
ರಾಧಾ ಅವರು ನಿವೇಶನ ಮಾರಾಟದಿಂದ ಬಂದ ಹಣದಿಂದ ಅಪಾರ್ಟ್ ಮೆಂಟ್ ಖರೀದಿಸಲು ನಿರ್ಧರಿಸಿದ್ದರು. ಜೂನ್ 9ರಂದು ಹಣ ತೆಗೆದುಕೊಳ್ಳಲು ಬೀರು ತೆರೆದಾಗ ಹಣ ಮತ್ತು ಚಿನ್ನಾಭರಣ ಕಳವಾಗಿದ್ದು ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ರಾಧಾ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದರು. ಮನೆ ಕೆಲಸದಾಕೆ ಉಮಾ ಜೂನ್ 4ರ ಬೆಳಿಗ್ಗೆ ಬ್ಯಾಗ್ ವೊಂದನ್ನು ಹಿಡಿದುಕೊಂಡು ಮನೆಯಿಂದ ಹೊರ ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಅನುಮಾನಗೊಂಡು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.