ಶಿವಮೊಗ್ಗ-ಉಡುಪಿ ಸಂಪರ್ಕ ಕಡಿತ: ಹುಲಿಕಲ್ ಘಾಟಿಯಲ್ಲಿ ಲಾರಿ ಕೆಟ್ಟು ನಿಂತು ವಾಹನ ಸಂಚಾರ ಸ್ಥಗಿತ!

ಶಿವಮೊಗ್ಗ: ಹುಲಿಕಲ್ ಘಾಟಿಯ ಶಂಕರನಾರಾಯಣ ದೇವಸ್ಥಾನದ ಸಮೀಪ ತಡರಾತ್ರಿ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಆಯಕ್ಸೆಲ್ ಕಟ್ ಆಗಿ ನಿಂತುಕೊಂಡಿದೆ. ಇದರಿಂದ ಉಡುಪಿ-ಶಿವಮೊಗ್ಗ ಜಿಲ್ಲೆಗಳ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿದೆ.
ರಾತ್ರಿ 11 ಗಂಟೆಯ ವೇಳೆ ಈ ಘಟನೆ ನಡೆದಿದ್ದು, ಕಳೆದ ಏಳು ತಾಸುಗಳಿಂದ ಘಟ್ಟದ ಮೇಲಕ್ಕೆ ಬರುವ ಹಾಗೂ ಕೆಳಕ್ಕೆ ಹೋಗುವ ನೂರಾರು ವಾಹನಗಳು ಘಾಟಿಯಲ್ಲೇ ಉಳಿದಿವೆ.
ವಿಪರೀತ ಮಳೆ, ಗುಡ್ಡ ಕುಸಿಯುವ ಭೀತಿಯಲ್ಲಿ ವಾಹನ ಸವಾರರು ರಸ್ತೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಹೊಸನಗರ ಪೊಲೀಸರಿಗೆ ಕರೆ ಮಾಡಿ ಲಾರಿ ತೆರವುಗೊಳಿಸುವಂತೆ ಮನವಿ ಮಾಡಿದರೆ ಸ್ಪಂದಿಸಲಿಲ್ಲ. ಕ್ರೇನ್ ನವರು ಸ್ಥಳಕ್ಕೆ ಬರಲು ಒಪ್ಪುತ್ತಿಲ್ಲ. ರಾತ್ರಿ ಓಡಾಟ ನಡೆಸುವುದಿಲ್ಲ. ಬೆಳಕು ಹರಿಯಲಿ ಎನ್ನುತ್ತಿದ್ದಾರೆ. ಹೀಗಾಗಿ ನಾವು ಅಸಹಾಯಕರು ಎಂದು ಪೊಲೀಸರು ಕೈಚೆಲ್ಲಿದರು ಎಂದು ಉಡುಪಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರಯಾಣಿಕ ಬಳ್ಳಾರಿಯ ಶಿವಾನಂದ ಬೇಸರ ವ್ಯಕ್ತಪಡಿಸಿದರು.
ಸರಕು ಹೊತ್ತ ಲಾರಿ ಶಿವಮೊಗ್ಗದಿಂದ ಉಡುಪಿ ಜಿಲ್ಲೆ ಸಿದ್ದಾಪುರದ ಕಡೆ ಹೊರಟಿದೆ. ಲಾರಿ ರಸ್ತೆ ಮಧ್ಯೆ ಸಿಲುಕಿ ಟ್ರಾಫಿಕ್ ಜಾಮ್ ಆಗಿದ್ದರೂ ಚಾಲಕ ಹಾಗೂ ಕ್ಲೀನರ್ ಅರಾಮವಾಗಿ ನಿದ್ರೆಗೆ ಜಾರಿದ್ದಾರೆ. ಸಂಚಾರಕ್ಕೆ ರಸ್ತೆ ಸುಗಮಗೊಳಿಸುವ ಯಾವುದೇ ಪ್ರಯತ್ನಕ್ಕೂ ಕೈ ಜೋಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ, ಚಳಿಗೆ ಬಸ್ ಗಳಲ್ಲಿ ಮಕ್ಕಳು, ಮಹಿಳೆಯರ ಸ್ಥಿತಿ ಹೇಳತೀರದಾಗಿದೆ ಎಂದರು.
ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಕ್ರೇನ್ ಒಯ್ದು ತಕ್ಷಣ ಲಾರಿ ತೆರವುಗೊಳಿಸಲು ಹೊಸನಗರ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕೆಲ ಹೊತ್ತಿನಲ್ಲೇ ಘಾಟಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಭಾರೀ ಮಳೆಯ ಕಾರಣ ಭೂ ಕುಸಿತದ ಭೀತಿಯಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯಿಂದ ಕರಾವಳಿ ಸಂಪರ್ಕಕ್ಕೆ ಹುಲಿಕಲ್ ಘಾಟಿ ಬಳಕೆ ಆಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ವಾರದ ಹಿಂದೆ ಹುಲಿಕಲ್ ಘಾಟಿಯಲ್ಲೂ ಗುಡ್ಡ ಕುಸಿತ ಆಗಿದ್ದು, ಕೆಲವು ಕಡೆ ಕಿರಿದಾದ ದಾರಿಯಲ್ಲಿ ವಾಹನಗಳು ಸಂಚರಿಸಬೇಕಿದೆ.