ಕುಕ್ಕೆ ಬಸ್ ನಿಲ್ದಾಣದಲ್ಲಿ ಹೊಸ ವಿವಾದ-ಪ್ರಯಾಣಿಕರಿಂದ ರಸ್ತೆ ತಡೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ನೇರವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ ಎಂದು ಆಕ್ರೋಶಗೊಂಡ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದ ರಸ್ತೆಗೆ ಬ್ಯಾರಿಕೇಡ್ಗಳನ್ನು ಅಡ್ಡ ಇರಿಸಿ ಸಂಚಾರಕ್ಕೆ ತಡೆ ಒಡ್ಡಿದ ಘಟನೆ ರವಿವಾರ ಅಪರಾಹ್ನ ನಡೆದಿದೆ.
ಬೆಂಗಳೂರು ಬಸ್ಗಳಲ್ಲಿ ಸಕಲೇಶಪುರ, ಹಾಸನ, ಮಡಿಕೇರಿ, ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಅವಕಾಶ ನೀಡದ ಕಾರಣ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದ ಹಲವು ಪ್ರಯಾಣಿಕರು ಬಸ್ ಚಾಲಕ, ನಿರ್ವಾಹಕರೊಡನೆ ವಾಗ್ವಾದಕ್ಕಿಳಿದರು. ಆದರೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಸಮೀಪದಲ್ಲೇ ಇದ್ದ ಬ್ಯಾರಿಕೇಡ್ಗಳನ್ನು ನಿಲ್ದಾಣದಿಂದ ಹೊರಗೆ ಬರುವ ದಾರಿಗೆ ಅಡ್ಡ ಇರಿಸಿದರು. ಆದಿಸುಬ್ರಹ್ಮಣ್ಯ ಕಡೆಗೆ ತೆರಳುವಲ್ಲೂ ರಸ್ತೆಗೆ ಬ್ಯಾರಿಕೇಡ್ ಇರಿಸಿದ್ದರು. ಇದರಿಂದ ಬಸ್ ನಿಲ್ದಾಣ ಪರಿಸರದಲ್ಲಿ ಗೊಂದಲದ ವಾತವರಣ ಉಂಟಾಯಿತು.
ಬಳಿಕ ಅಲ್ಲಿಗೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಬ್ಯಾರಿಕೇಡ್ ತೆರವು ಮಾಡಿದರು. ಎಸ್ಐ ಕಾರ್ತಿಕ್ ಅವರು ಪ್ರಯಾಣಿಕರನ್ನು ಸಮಾಧಾನಿಸಿದರು. ಹಾಗೂ ಬಸ್ ನಿರ್ವಹಕರ ಜತೆ ಮಾತನಾಡಿ ಬೇರೆ ಕಡೆಯ ಪ್ರಯಾಣಿಕರನ್ನೂ ಕರೆದೊಯ್ಯುವಂತೆ ವಿನಂತಿಸಿದರು. ಅಂತಿಮವಾಗಿ ಇತರ ಪ್ರಯಾಣಿಕರಿಗೂ ಬೆಂಗಳೂರು ಬಸ್ಗಳಲ್ಲಿ ಸಂಚರಿಸಲು ಅವಕಾಶ ನೀಡುವುದರೊಂದಿಗೆ ಗೊಂದಲ ನಿವಾರಣೆಯಾಗಿ ವಿವಿಧೆಡೆಗೆ ಬಸ್ಗಳು ಸಂಚಾರ ಆರಂಭಿಸಿದವು.
ಭಕ್ತರ ದಟ್ಟಣೆ
ಎರಡನೇ ಶನಿವಾರ ಹಾಗೂ ರವಿವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಕುಕ್ಕೆಗೆ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಬಸ್ಗಳಲ್ಲೇ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿತು.