ಹೃದಯ ವಿದ್ರಾವಕ ಘಟನೆ: ಆಂಬ್ಯುಲೆನ್ಸ್ ಇಲ್ಲದೆ ಮಗು ಸಾವು, 80 ಕಿ.ಮೀ ಬಸ್ನಲ್ಲಿ ಶವ ಸಾಗಿಸಿದ ತಂದೆ

ಪಾಲ್ಘರ್: ಪಾಲ್ಘರ್ನ ಹಳ್ಳಿಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಪಾಲ್ಘರ್ ಜಿಲ್ಲೆಯ ಮೊಖಡಾದಲ್ಲಿ ಗರ್ಭಿಣಿ ಮಹಿಳೆಗೆ ಸಕಾಲಿಕ ಆಂಬ್ಯುಲೆನ್ಸ್ ಸೇವೆ ಸಿಗದೆ ನವಜಾತ ಶಿಶುವೊಂದು ದುರಂತವಾಗಿ ಸಾವನ್ನಪ್ಪಿದೆ. ಹೆರಿಗೆ ನೋವು ಬಂದ ನಂತರ ಆಕೆ 15 ಗಂಟೆಗಳ ಕಾಲ ಕಷ್ಟ ಅನುಭವಿಸಬೇಕಾಯಿತು. ಆಕೆಯಿದ್ದ ಊರಿನಲ್ಲಿ ಸಾರಿಗೆ ಕೊರತೆ ಮತ್ತು ಅವರ ಆರ್ಥಿಕ ಸಂಕಷ್ಟದಿಂದಾಗಿ ಆಕೆಯ ಗಂಡ ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು 80 ಕಿ.ಮೀ ದೂರದ ಮನೆಗೆ ಸಾರ್ವಜನಿಕ ಬಸ್ ಮೂಲಕ ಪ್ರಯಾಣ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಆ ಗರ್ಭಿಣಿ ಮಹಿಳೆಯ ನವಜಾತ ಶಿಶು ಹುಟ್ಟಿದ ಕೂಡಲೆ ಮೃತಪಟ್ಟಿದೆ. ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಆ ಮಗುವಿನ ತಾಯಿ ಅದೃಷ್ಟವಶಾತ್ ಬದುಕುಳಿದ್ದಾರೆ.
ತುರ್ತು ವೈದ್ಯಕೀಯ ವಾಹನಗಳು ತಕ್ಷಣ ಬಂದಿದ್ದರೆ ತಮ್ಮ ಮಗುವನ್ನು ಉಳಿಸಬಹುದಿತ್ತು ಎಂದು ಕುಟುಂಬವು ಆರೋಪಿಸಿದೆ. ಈ ಆಘಾತಕಾರಿ ಘಟನೆಯು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಜೋಗಲ್ವಾಡಿ ಗ್ರಾಮದ 26 ವರ್ಷದ ಅವಿತಾ ಸಖಾರಾಮ್ ಅವರಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆರಿಗೆ ನೋವು ಶುರುವಾಯಿತು. ಅವರ ಕುಟುಂಬವು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿತು. ಆದರೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ತಿಳಿಸಲಾಯಿತು. ಬೆಳಿಗ್ಗೆ 8 ಗಂಟೆಯವರೆಗೂ ಮತ್ತೆ ಮತ್ತೆ ಕರೆ ಮಾಡಲಾಯಿತು. ಮಧ್ಯಾಹ್ನವಾದರೂ ಯಾವುದೇ ಸಹಾಯ ಬರಲಿಲ್ಲ.
ಹೀಗಾಗಿ, ಬೇರೆ ದಾರಿಯಿಲ್ಲದೆ ಆಕೆಯ ಕುಟುಂಬವು ಅವಳನ್ನು ಖೋಡಾಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಖಾಸಗಿ ವಾಹನವನ್ನು ವ್ಯವಸ್ಥೆ ಮಾಡಿತು. ಅಲ್ಲಿ, ಅವಳನ್ನು ಮೊಖಾಡಾ ಗ್ರಾಮೀಣ ಆಸ್ಪತ್ರೆಗೆ ವರ್ಗಾಯಿಸಬೇಕೆಂದು ವೈದ್ಯರು ನಿರ್ಧರಿಸಿದರು. ಆಗಲೂ ಸ್ಥಳೀಯ ಆರೋಗ್ಯ ಉಪಕೇಂದ್ರದಿಂದ ವಿನಂತಿಸಿದ ನಂತರವೂ ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಅಂತಿಮವಾಗಿ, ಸಂಜೆ 6 ಗಂಟೆಯ ಹೊತ್ತಿಗೆ ಅಂದರೆ ಆಕೆಗೆ ಹೆರಿಗೆ ನೋವು ಪ್ರಾರಂಭವಾದ 15 ಗಂಟೆಗಳ ನಂತರ ಅವಿತಾ ಅವರನ್ನು ಮೊಖಾಡಾ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಯಿತು. ಗರ್ಭದಲ್ಲೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಆಪರೇಷನ್ ಮೂಲಕ ಹೊರಗೆ ತೆಗೆಯಲಾಯಿತು. ಆದರೆ, ಆ ಮಗು ಹುಟ್ಟಿದ ಕೂಡಲೆ ಸಾವನ್ನಪ್ಪಿತು. ನಂತರ ಅವಿತಾಳನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ನಾಸಿಕ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಯಶಸ್ವಿಯಾಗಿ ಆಪರೇಷನ್ ಮಾಡಿ ಆಕೆಯ ಜೀವವನ್ನು ಉಳಿಸಿದರು.
ಇದಿಷ್ಟೇ ಅಲ್ಲ, ಇನ್ನು ಮುಂದೆ ನಡೆದ ಘಟನೆಗಳು ಸುತ್ತಮುತ್ತಲಿನವರನ್ನು ಬೆಚ್ಚಿಬೀಳಿಸಿದೆ. ಹೆರಿಗೆಯ ನಂತರ, ಮೃತ ನವಜಾತ ಶಿಶುವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯು ಅವರಿಗೆ ಆ್ಯಂಬುಲೆನ್ಸ್ ಅಥವಾ ಬೇರಾವುದೇ ವಾಹನದ ವ್ಯವಸ್ಥೆಗಳನ್ನು ಮಾಡಲಿಲ್ಲ. ಹೀಗಾಗಿ, ಅವಿತಾಳ ಗಂಡ ಸಖಾರಾಮ್ ಸಾವನ್ನಪ್ಪಿದ ತನ್ನ ಶಿಶುವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿಕೊಂಡು, ಅದರ ಅಂತ್ಯಕ್ರಿಯೆಗೆ ಬಸ್ನಲ್ಲಿಯೇ 80 ಕಿ.ಮೀ ದೂರದ ಮನೆಗೆ ಪ್ರಯಾಣಿಸಿದ್ದಾರೆ. ಖಾಸಗಿ ವಾಹನವನ್ನು ಬಾಡಿಗೆಗೆ ಪಡೆಯಲು ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಹಣವಿಲ್ಲದೆ ತನ್ನ ಮಗುವಿನ ಪುಟ್ಟ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಸಾರ್ವಜನಿಕ ಬಸ್ ಹತ್ತಿದ್ದಾರೆ. ನಂತರ ಊರಿನಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.
ಅವಿತಾಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ತಾಯಿ-ಮಗು ಇಬ್ಬರೂ ಆರೋಗ್ಯವಾಗಿರುತ್ತಿದ್ದರು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಎಷ್ಟೇ ಆಧುನಿಕ ವ್ಯವಸ್ಥೆಗಳು ಬಂದಿದ್ದರೂ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗದೆ ಸಾಯುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.