ನಾಗಮಂಗಲದಲ್ಲಿ ಅಂತರ್ ಜಿಲ್ಲಾ ಕಳ್ಳನ ಬಂಧನ: ₹40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮಂಡ್ಯ: ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನನ್ನು ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, 490 ಗ್ರಾಂ ಚಿನ್ನದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹40 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಹಾಸನ ಜಿಲ್ಲೆ ಆಲೂರು ತಾಲ್ಲೂಕು ಮುದಿಗೆರೆ ಗ್ರಾಮದ ಎಂ.ವಿ. ರಂಗೇಗೌಡ ಅಲಿಯಾಸ್ ಐಪಿಎಲ್ ಸಂತೋಷ(37) ಬಂಧಿತ.
ನಾಗಮಂಗಲ ತಾಲ್ಲೂಕು ಬಿದರಕೆರೆ ಗ್ರಾಮದ ಗಂಗೇಗೌಡ ಅವರ ಮನೆಯಲ್ಲಿ ಮೇ 18ರಂದು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ 20 ಗ್ರಾಂ ಚಿನ್ನಾಭರಣ ಮತ್ತು ₹97 ಸಾವಿರ ಕಳ್ಳತನ ನಡೆದಿತ್ತು. ಮೇ 20ರಂದು ಗಂಗೇಗೌಡ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಬಿ.ಚಲುವರಾಜು ಅವರ ಮಾರ್ಗದರ್ಶನದಲ್ಲಿ ನಾಗಮಂಗಲ ಗ್ರಾಮಾಂತರ ಠಾಣೆಯ ಸಿಪಿಐ ಕೆ.ಎಸ್.ನಿರಂಜನ, ಪಿಎಸ್ಐಗಳಾದ ವೈ.ಎನ್.ರವಿಕುಮಾರ್, ಟಿ.ಮಾರುತಿ, ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಜೂ.1ರಂದು ಹಾಸನದಲ್ಲಿದ್ದ ಆರೋಪಿ ಸಂತೋಷನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ’ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಹೆಸರಿನಲ್ಲಿ ಹತ್ತು ಪ್ರಕರಣ:
‘ಆರೋಪಿ ಸಂತೋಷ್ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ-3, ಬೆಳ್ಳೂರು ಠಾಣೆಯಲ್ಲಿ-4, ನಾಗಮಂಗಲ ಗ್ರಾಮಾಂತರ, ತುರುವೇಕೆರೆ ಠಾಣೆ, ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ತಲಾ ಒಂದರಂತೆ ಒಟ್ಟು ಹತ್ತು ಪ್ರಕರಣಗಳು ಇವೆ. ಹಲವು ಬಾರಿ ಸೆರೆವಾಸ ಅನುಭವಿಸಿದ್ದರೂ, ಹೊರಬಂದ ನಂತರ ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುವುದನ್ನೇ ಮುಂದುವರಿಸಿ ಈಗ ಸಿಕ್ಕಿಬಿದ್ದಿದ್ದಾನೆ’ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪ್ರಶಾಂತ್ ಕುಮಾರ್, ಮಧು ಕುಮಾರ, ಇಂದ್ರಕುಮಾರ್, ರವಿಕಿರಣ್, ಲೋಕೇಶ್, ದಿನೇಶ್ ಅವರನ್ನು ಎಸ್ಪಿ ಶ್ಲಾಘಿಸಿದರು.
ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ
‘ಮಂಡ್ಯ ನಗರದ ಹಲವು ಕಡೆ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಕೆಲವು ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಸಹಾಯ ಆಗುತ್ತದೆ. ಮಳವಳ್ಳಿ ಪಟ್ಟಣದಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಉಳಿದ ತಾಲ್ಲೂಕು ಕೇಂದ್ರದ ಪ್ರಮುಖ ಸ್ಥಳಗಳಲ್ಲಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.