ಸಾಂಗ್ಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ವಿವಾಹದ 15 ದಿನಕ್ಕೆ ಪತಿಯನ್ನು ಕೊಂದ ಪತ್ನಿ

ಮಹಾರಾಷ್ಟ್ರ :ಇಷ್ಟವಿಲ್ಲದ ಮದುವೆ ಮಾಡಿಕೊಂಡು ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿವೆ. ಹೆಂಡತಿಯೊಂದಿಗೆ ಹನಿಮೂನ್ಗೆ ಹೋಗಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದ ಬೆನ್ನಲ್ಲಿಯೇ ಮತ್ತೊಂದು ಗಂಡನ ಕೊಲೆ ಕೇಸ್ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ 15 ದಿನಕ್ಕೆ ಗಂಡ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಬಲವಂತ ಮಾಡಿದ್ದಕ್ಕೆ ಕೋಪಗೊಂಡ ಕೊಲೆ ಮಾಡಿದ್ದಾಳೆಂಬ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಹೆಂಡತಿ ಅನೈತಿಕ ಸಂಬಂಧ ಅಥವಾ ಮದುವೆಗೆ ಮೊದಲಿದ್ದ ಪ್ರೇಮ ಸಂಬಂಧದ ಕಾರಣಕ್ಕೆ ಮದುವೆ ಮಾಡಿಕೊಂಡ ಗಂಡನನ್ನೇ ಕೊಲೆ ಮಾಡುವ ಘಟನೆಗಳು ಹೆಚ್ಚಾಗಿ ವರದಿ ಆಗುತ್ತಿವೆ. ಇಂದೋರ್ನ ಉದ್ಯಮಿ ರಾಜಾ ರಘುವಂಶಿಯನ್ನು ಆತನ ಹೆಂಡತಿ ಹನಿಮೂನ್ಗೆ ಕರೆದೊಯ್ದು ಪ್ರಿಕರನೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿದ ಸುದ್ದಿ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲಿಯೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಮದುವೆ ಮಾಡಿಕೊಂಡು ಗಂಡನೊಂದಿಗೆ ಸಂಸಾರ ಆರಂಭಿಸಿದ ಕೇವಲ 15 ದಿನಕ್ಕೆ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಒಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹೊಸದಾಗಿ ಮದುವೆಯಾದ ಮಹಿಳೆ ತನ್ನ ಗಂಡನನ್ನು ಕ್ರೂರವಾಗಿ ಕೊಂದಿದ್ದಾಳೆ. ಘಟನೆ ಬುಧವಾರ ರಾತ್ರಿ ಸುಮಾರು 12.30ಕ್ಕೆ ನಡೆದಿದೆ. ಮಲಗಿದ್ದ ಗಂಡನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. 27 ವರ್ಷದ ಮಹಿಳೆ ರಾಧಿಕಾ 53 ವರ್ಷದ ಅನಿಲ್ ಲೋಖಂಡೆ ಅವರನ್ನು ಎರಡನೇ ಮದುವೆಯಾಗಿದ್ದಳು. ಲೋಖಂಡೆ ಅವರ ಮೊದಲ ಹೆಂಡತಿ ಕ್ಯಾನ್ಸರ್ನಿಂದ ನಿಧನರಾಗಿದ್ದರು. ಎರಡನೇ ಮದುವೆಯಾಗಿ ಕೇವಲ 15 ದಿನಗಳಲ್ಲಿ, ರಾಧಿಕಾ ತನ್ನ ಗಂಡನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಂದಿದ್ದಾಳೆ.
ಕೊಲೆಗೆ ಕಾರಣವೇನು?
ಪೊಲೀಸರ ಪ್ರಕಾರ, ರಾಧಿಕಾ ತನ್ನ ಗಂಡನೊಂದಿಗೆ ದೈಹಿಕ ಸಂಬಂಧ ಹೊಂದಲು ಮತ್ತು ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸಲು ಇಷ್ಟವಿರಲಿಲ್ಲ. ಈ ಬಗ್ಗೆ ಇಬ್ಬರ ನಡುವೆ ಹಲವು ಬಾರಿ ಜಗಳವಾಗಿತ್ತು. ಘಟನೆ ನಡೆದ ರಾತ್ರಿ ಕೂಡ ಇದೇ ಕಾರಣಕ್ಕೆ ಜಗಳ ನಡೆದಿತ್ತು. ಆದರೂ, ಗಂಡ ತನ್ನೊಂದಿಗೆ ದೈಹಿಕವಾಗಿ ಸಂಪರ್ಕ ಹೊಂದಲು ಬಲವಂತ ಮಾಡಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಕುಪ್ವಾಡ್ ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ‘ರಾಧಿಕಾ ಕೋಪದಿಂದ ರಾತ್ರಿ ಕೊಡಲಿ ತೆಗೆದುಕೊಂಡು ಮಲಗಿದ್ದ ಗಂಡನ ತಲೆಗೆ ಹೊಡೆದಿದ್ದಾಳೆ. ಆಗ ಆಕೆಯ ಗಂಡ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ
ಆರೋಪಿ ಹೆಂಡತಿ ಬಂಧನ:
ಗಂಡ ಅನಿಲ್ನನ್ನು ಕೊಲೆ ಮಾಡಿದ ನಂತರ ಆಕೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮತ್ತು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿ ರಾಧಿಕಾಳನ್ನು ವಿಚಾರಣೆ ನಡೆಸಲಾಗುತ್ತಿದೆ. ಇಷ್ಟವಿಲ್ಲದ ಮೇಲೆ ಮದುವೆ ಮಾಡಿಕೊಂಡು ಗಂಡನನ್ನು ಕೊಲೆ ಮಾಡುವುದೇಕೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಷ್ಟವಿಲ್ಲದ ಮದುವೆಯನ್ನು ಮೊದಲೇ ಮುರಿದುಕೊಳ್ಳುವುದರಿಂದ ಜೀವವಾದರೂ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಾ ರಘುವಂಶಿ ಪ್ರಕರಣದಂತೆಯೇ ಈ ಘಟನೆ
ಈ ಘಟನೆ ಒಂದು ವಾರದ ಮುಂಚೆ ಮೇಘಾಲಯಕ್ಕೆ ಹೆಂಡತಿಯನ್ನು ಕರೆದುಕೊಂಡು ಹನಿಮೂನ್ಗೆ ಹೋಗಿದ್ದ ಗಂಡನನ್ನು ಕೊಲೆ ಮಾಡಿದ ಪ್ರಕರಣ ನೆನಪಿಗೆ ತರುತ್ತದೆ. ಈ ಘಟನೆಯಲ್ಲಿ ಮಧ್ಯಪ್ರದೇಶ ರಾಜ್ಯದ ಇಂದೋರ್ನ ಸಾರಿಗೆ ಉದ್ಯಮಿ ರಾಜಾ ರಘುವಂಶಿಯನ್ನು ಅವರ ಪತ್ನಿ ಸೋನಂ ತನ್ನ ಪ್ರೇಮಿ ಮತ್ತು ಕಿರಾಯಿ ಕೊಲೆಗಾರರೊಂದಿಗೆ ಸೇರಿ ಕೊಂದಿದ್ದಳು. ಇಂತಹ ಘಟನೆಗಳು ಕಾನೂನು ಸುವ್ಯವಸ್ಥೆ ಮತ್ತು ಸಂಬಂಧಗಳ ಸತ್ಯಾಸತ್ಯತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ನ್ಯಾಯಾಲಯ ಮತ್ತು ಪೊಲೀಸರು ಈ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.