ಭಾರತೀಯ ವಲಸೆಗೆ ಕಾರ್ಮಿಕರಿಗೆ ಕುವೈತ್ ನ ಹೊಸ ನಿಯಮ

ಕುವೈತ್:ಮಹತ್ವದ ಬೆಳವಣಿಗೆಯೊಂದರಲ್ಲಿ, ಖಾಸಗಿ ವಲಯದಲ್ಲಿರುವ ವಲಸಿಗ ಕಾರ್ಮಿಕರು ತಮ್ಮ ವಿದೇಶ ಪ್ರಯಾಣಕ್ಕೂ ಮೊದಲು ನೋಂದಾಯಿತ ಉದ್ಯೋಗದಾತರಿಂದ ಅಧಿಕೃತ ನಿರ್ಗಮನ ಪರವಾನಗಿಯನ್ನು ಪಡೆಯಬೇಕು ಎಂಬ ಹೊಸ ನಿಯಮವನ್ನು ಕುವೈತ್ ಸರ್ಕಾರ ಜಾರಿಗೊಳಿಸಿದೆ.ಮುಂದಿನ ತಿಂಗಳು ಅಂದರೆ ಜುಲೈ ಆರಂಭದಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಈ ಕ್ರಮವನ್ನು “ಕಾರ್ಮಿಕರು ಮತ್ತು ಉದ್ಯೋಗದಾತರ ಹಕ್ಕುಗಳನ್ನು ರಕ್ಷಿಸುವಾಗ, ವಲಸಿಗರ ಚಲನಶೀಲತೆಯ ಮೇಲ್ವಿಚಾರಣೆಯನ್ನು ಬಲಪಡಿಸುವ ಪ್ರಯತ್ನಗಳ ಭಾಗ” ಎಂದು ಕುವೈತ್ ಸರ್ಕಾರ ಬಣ್ಣಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕುವೈತ್ ಉಪ ಪ್ರಧಾನಮಂತ್ರಿ ಮತ್ತು ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸೆಫ್, “ಎಲ್ಲಾ ವಲಸಿಗ ಕಾರ್ಮಿಕರು ದೇಶವನ್ನು ತೊರೆಯುವ ಮೊದಲು ನಿರ್ಗಮನ ಪರವಾನಗಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಶೇಖ್ ಫಹಾದ್ ಅಲ್-ಯೂಸೆಫ್ ಮೇಲುಸ್ತುವಾರಿಯಲ್ಲೇ ಈ ಆದೇಶದ ಔಪಚಾರಿಕ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಹೊಸ ನಿಯಮ ಏನು ಹೇಳುತ್ತದೆ?
ಹೊಸ ನಿಯಮ ಅನುಷ್ಠಾನಗೊಂಡ ಬಳಿಕ ಕುವೈತ್ನಲ್ಲಿ ಕೆಲಸ ಮಾಡುವ ಎಲ್ಲಾ ವಲಸಿಗ ಕಾರ್ಮಿಕರು ವಿದೇಶ ಪ್ರಯಾಣದ ಮೊದಲು, ತಮ್ಮ ವೈಯಕ್ತಿಕ ವಿವರಗಳು ಹಾಗೂ ಪ್ರಯಾಣ ದಿನಾಂಕ ಮತ್ತು ಸಾರಿಗೆ ವಿಧಾನವನ್ನು ಒಳಗೊಂಡ ದಾಖಲಾತಿಗಳಿಗೆ ಉದ್ಯೋಗದಾತರಿಂದ ಪರರವಾನಗಿ ಪತ್ರವನ್ನು ಪಡೆಯಬೇಕಾಗುತ್ತದೆ.
ವಲಸಿಗರ ಕಾರ್ಮಿಕರ ವಿದೇಶ ಪ್ರಯಾಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ನಿಖರತೆಯನ್ನು ಕಾಪಾಡಿಕೊಳ್ಳಲು, ಪೂರ್ಣಗೊಂಡ ಪರವಾನಗಿಯನ್ನು ಗೊತ್ತುಪಡಿಸಿದ ವೇದಿಕೆಯ ಮೂಲಕ ಆನ್ಲೈನ್ ಮೂಲಕ ಸಲ್ಲಿಸಬೇಕು.
ವಲಸೆ ಕಾರ್ಮಿಕರ ನಿರ್ಗಮನವನ್ನು ಕಾನೂನುಬದ್ಧವಾಗಿರುವಂತೆ ನೋಡಿಕೊಳ್ಳುವುದು, ಈ ನಿಯಮದ ಉದ್ದೇಶ ಎಂದು ಕುವೈತ್ ಸರ್ಕಾರ ಹೇಳಿದೆ. ಅಲ್ಲದೇ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿರುವ ಖಾಸಗಿ ಕಂಪನಿಗಳ ರಕ್ಷಣೆಯ ಉದ್ದೇಶವನ್ನೂ ಈ ನಿಯಮ ಹೊಂದಿದೆ ಎಂದು ಹೇಳಲಾಗಿದೆ.
ಸರಿಯಾದ ಸೂಚನೆ ಇಲ್ಲದೆ ವಲಸೆ ಕಾರ್ಮಿಕರು ದೇಶ ಬಿಡುವ ಘಟನೆಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಹೊಸ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕುವೈತ್ ಸರ್ಕಾರ ಮಾಹಿತಿ ನೀಡಿದೆ.
ಜುಲೈ 1 ರಿಂದ ಈ ಹೊಸ ನಿಯಮ ಜಾರಿಯಾಗಲಿರುವುದರಿಂದ, ಉದ್ಯೋಗದಾತರು ಮತ್ತು ವಲಸಿಗ ಕಾರ್ಮಿಕರು ಇಬ್ಬರೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕುವೈತ್ ವಲಸೆ ಇಲಾಖೆ ಸ್ಪಷ್ಟಪಡಿಸಿದೆ.
ಕುವೈತ್ನಲ್ಲಿ ಭಾರತೀಯ ಕಾರ್ಮಿಕರು:
ಕುವೈತ್ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರು ಶೇ. 21 (1 ಮಿಲಿಯನ್) ಮತ್ತು ಅದರ ಕಾರ್ಯಪಡೆಯ ಶೇ. 30 (ಸುಮಾರು 9 ಲಕ್ಷ) ರಷ್ಟಿದ್ದಾರೆ. ಕುವೈತ್ನ ಖಾಸಗಿ ವಲಯ ಮತ್ತು ದೇಶೀಯ ವಲಯದ ಕಾರ್ಯಪಡೆಯ ಪಟ್ಟಿಯಲ್ಲಿ, ಭಾರತೀಯ ಕಾರ್ಮಿಕರು ಅಗ್ರಸ್ಥಾನದಲ್ಲಿದ್ದಾರೆ. ಕುವೈತ್ನಲ್ಲಿ ಕೆಲಸ ಮಾಡುವ ಭಾರತೀಯ ವೃತ್ತಿಪರರಲ್ಲಿ, ವೈದ್ಯಕೀಯ ವಲಯ ಹೆಚ್ಚಿನ ಭಾರತೀಯ ಕಾರ್ಮಿಕರನ್ನು ಹೊಂದಿದೆ.
ಭಾರತೀಯ ವೈದ್ಯರು ಮತ್ತು ಅರೆವೈದ್ಯರು ತಮ್ಮ ಪರಿಣತಿ, ಸಹಾಯಕಾರಿ ಗುಣ ಮತ್ತು ಸಹಾನುಭೂತಿಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಕುವೈತ್ನಲ್ಲಿ ಸುಮಾರು 1,000 ಭಾರತೀಯ ವೈದ್ಯರು, 500 ಭಾರತೀಯ ದಂತ ವೈದ್ಯರು ಮತ್ತು ಸುಮಾರು 24,000 ಭಾರತೀಯ ದಾದಿಯರು ಕೆಲಸ ಮಾಡುತ್ತಿದ್ದಾರೆ.