ಸೈಬರ್ ಕಳ್ಳರ ಬಲೆಗೆ ವೃದ್ಧ ದಂಪತಿ: ₹4.79 ಕೋಟಿ ವಂಚನೆ ಪ್ರಕರಣದಲ್ಲಿ ಶ್ರೀಲಂಕಾ ಸಂಪರ್ಕ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧ ದಂಪತಿಯಿಂದ ಸೈಬರ್ ಕಳ್ಳರು 4.79 ಕೋಟಿ ರೂ. ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ವಂಚನೆಗೊಳಗಾದವರನ್ನು ಮಂಜುನಾಥ್ ದಂಪತಿ ಹಾಗೂ ಆರೋಪಿಗಳನ್ನು ಈಶ್ವರ್ ಸಿಂಗ್, ನಾರಾಯಣ್ ಸಿಂಗ್ ಚೌಧರಿ ಎಂದು ಗುರುತಿಸಲಾಗಿದೆ.
ಮಂಜುನಾಥ್ ನೈಜಿರೀಯಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿ ಇದೀಗ ನಿವೃತ್ತಿಯಾಗಿದ್ದಾರೆ. ಸೈಬರು ಕಳ್ಳರು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಓವರ್ ಡ್ಯೂ ಆಗಿದೆ ಎಂದು ದಂಪತಿಗೆ ಕರೆ ಮಾಡಿದ್ದಾರೆ. ಬಳಿಕ ನಿಮ್ಮ ಅಕೌಂಟ್ನಲ್ಲಿ ಮನಿ ಲಾಂಡರಿಂಗ್ ಆಗಿದೆ. ಹೀಗಾಗಿ ಇಡಿ, ಸಿಬಿಐನಲ್ಲಿ ನಿಮ್ಮ ವಿರುದ್ಧ ಕೇಸ್ ಆಗಿದೆ ಎಂದು ಹೆದರಿಸಿದ್ದಾರೆ. ಜೊತೆಗೆ ನಿಮ್ಮನ್ನು ಅರೆಸ್ಟ್ ಮಾಡಿ, ತಿಹಾರ್ ಜೈಲಿಗೆ ಹಾಕುತ್ತೇವೆ ಎಂದು ನಕಲಿ ವಾರಂಟ್ ಕಳಿಸಿದ್ದಾರೆ.
ದಂಪತಿಯನ್ನು ಹೆದರಿಸಿ ಹಂತ ಹಂತವಾಗಿ 4.79 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಈ ಕುರಿತು ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸೆನ್ ಪೊಲೀಸರು ಸದ್ಯ ಇಬ್ಬರನ್ನು ಬಂಧಿಸಿದ್ದಾರೆ.
ಈಶ್ವರ್ ಸಿಂಗ್ ಅಕೌಂಟ್ಗೆ 10 ಲಕ್ಷ ರೂ. ಹಾಗೂ ನಾರಾಯಣ್ ಸಿಂಗ್ ಅಕೌಂಟ್ಗೆ 1.8 ಕೋಟಿ ರೂ. ವರ್ಗಾವಣೆ ಆಗಿದೆ. ಇನ್ನೂ ತನಿಖೆ ವೇಳೆ ಆರೋಪಿಗಳಿಗೆ ಶ್ರೀಲಂಕಾ ಕೆಸಿನೋ ಜೊತೆಗೆ ನಂಟು ಇರುವುದಾಗಿ ಪತ್ತೆಯಾಗಿದೆ. ಜೊತೆಗೆ ಡಿಜಿಟಲ್ ಅರೆಸ್ಟ್ನಿಂದ ಬಂದ ಹಣದಲ್ಲಿ ಶ್ರೀಲಂಕಾಗೆ ಹೋಗಿ ಕೆಸಿನೊದಲ್ಲಿ ಆಟವಾಡಿರೋದು ಬೆಳಕಿಗೆ ಬಂದಿದೆ. ಕೆಸಿನೊ ಮತ್ತು ಸೈಬರ್ ವಂಚಕರು ಒಟ್ಟಾಗಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ