ICICI ಬ್ಯಾಂಕ್ನಲ್ಲಿ ಭಾರೀ ವಂಚನೆ – 4.58 ಕೋಟಿ ದುರ್ಬಳಕೆ ಮಾಡಿದ ‘ರಿಲೇಶನ್ಶಿಪ್ ಮ್ಯಾನೇಜರ್’ ಈಗ ಜೈಲಿಗೆ

ರಾಜಸ್ಥಾನ್ (ಕೋಟ): ಬ್ಯಾಂಕ್ ನಲ್ಲಿ ಹಣವಿದ್ದರೆ ಅದು ಸುರಕ್ಷಿತ ಎಂದು ಭಾವಿಸಬಹುದು. ಆದರೆ ಆಘಾತಕಾರಿ ಪ್ರಕರಣವೊಂದರಲ್ಲಿ ರಾಜಸ್ಥಾನದ ಮಹಿಳಾ ಬ್ಯಾಂಕ್ ಅಧಿಕಾರಿಯೊಬ್ಬರು ಗ್ರಾಹಕರ 4 ಕೋಟಿಗೂ ಅಧಿಕ ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ!
ಏನಿದು ಪ್ರಕರಣ?
ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಗಳಿಸುವ ಮೋಹಕ್ಕೆ ಬಿದ್ದ ಬ್ಯಾಂಕ್ ಅಧಿಕಾರಿ 41ಕ್ಕೂ ಅಧಿಕ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿನ 4 ಕೋಟಿಗೂ ಅಧಿಕ ಹಣವನ್ನು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಳು! ಈಕೆ ಎರಡು ವರ್ಷಗಳ ಕಾಲ ವಂಚನೆಯನ್ನು ಮುಂದುವರಿಸಿದ್ದರು ಕೂಡಾ ಬ್ಯಾಂಕ್ ನಲ್ಲಿದ್ದ ಅಧಿಕಾರಿಗಳಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲವಾಗಿತ್ತು.
ಐಸಿಐಸಿಐ ಬ್ಯಾಂಕ್ ನ ರಿಲೇಷನ್ ಶಿಪ್ ಮ್ಯಾನೇಜರ್ ಸಾಕ್ಷಿ ಗುಪ್ತಾ ಎಂಬಾಕೆ 2020 ಮತ್ತು 2023ರ ನಡುವೆ 41 ಗ್ರಾಹಕರ 110 ಸ್ಥಿರ ಠೇವಣಿ (Fixed deposit) ಖಾತೆಯಿಂದ 4.58 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ತನಿಖೆಯ ಪ್ರಕಾರ, ಗುಪ್ತಾ ಈ ಹಣವನ್ನು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಗಳಿಸುವ ದುರಾಸೆಯಿಂದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದಳು. ಆದರೆ ಷೇರುಪೇಟೆಯ ವಹಿವಾಟಿನಲ್ಲಿ ಭಾರೀ ನಷ್ಟ ಅನುಭವಿಸಿದ ಪರಿಣಾಮ ಈಕೆ ಡೆಪಾಸಿಟ್ ಖಾತೆಗಳಿಗೆ ಹಣ ಹಾಕುವಲ್ಲಿ ವಿಫಲಳಾಗಿದ್ದಳು. ಈ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಕ್ಷಿ ಗುಪ್ತಾ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಗ್ರಾಹಕರೊಬ್ಬರು ಐಸಿಐಸಿಐ ಬ್ಯಾಂಕ್ ಗೆ ಬಂದು, ತನ್ನ ಎಫ್ ಡಿ (Fixed deposit) ಹಣದ ಬಗ್ಗೆ ವಿಚಾರಿಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಂತರ ಬ್ಯಾಂಕ್ ಅಧಿಕಾರಿಗಳು ಫೆ.18ರಂದು ಪೊಲೀಸರಿಗೆ ದೂರು ನೀಡಿದ್ದರು.
ಸಾಕ್ಷಿ ಗುಪ್ತಾ ಅದೆಷ್ಟು ಚಾಲಕಿ ಅಂದರೆ ಗ್ರಾಹಕರ ಮೊಬೈಲ್ ನಂಬರ್ ಅನ್ನು ಬದಲಾಯಿಸಿಟ್ಟಿದ್ದು, ಇದರಿಂದಾಗಿ ಗ್ರಾಹಕರಿಗೆ ಖಾತೆಯಲ್ಲಿನ ವಹಿವಾಟಿನ ಮೆಸೇಜ್ ಹೋಗುತ್ತಿರಲಿಲ್ಲ.! ಸಾಕ್ಷಿ ಗುಪ್ತಾ ತನ್ನ ಕುಟುಂಬ ಸದಸ್ಯರ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿ 4 ಕೋಟಿಗೂ ಅಧಿಕ ಹಣವನ್ನು ವಿತ್ ಡ್ರಾ ಮಾಡಿದ್ದಳು. ಖಾತೆದಾರರಿಗೆ ವಂಚನೆ ಸುಳಿವು ಸಿಗದಿರಲು ಆಕೆ ಒಟಿಪಿಯನ್ನು ಕೂಡಾ ತನ್ನ ಡಿವೈಸ್ಡ್ ಸಿಸ್ಟಮ್ ಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿರುವುದಾಗಿ ತನಿಖಾಧಿಕಾರಿ ಇಬ್ರಾಹಿಂ ಖಾನ್ ತಿಳಿಸಿದ್ದಾರೆ.
ವಂಚನೆ ಬಗ್ಗೆ ಐಸಿಐಸಿಐ ಇನ್ನಷ್ಟೇ ಪ್ರಕಟನೆ ಹೊರಡಿಸಬೇಕಾಗಿದ್ದು, ಮೂಲಗಳ ಪ್ರಕಾರ ವಂಚನೆಗೊಳಗಾದ ಗ್ರಾಹಕರಿಗೆ ನಷ್ಟವನ್ನು ತುಂಬಿಕೊಡುವುದಾಗಿ ತಿಳಿಸಿದೆ.
ಬ್ಯಾಂಕ್ ಪ್ರತಿಕ್ರಿಯೆ:
“ನಮ್ಮ ಗ್ರಾಹಕರ ಹಿತಾಸಕ್ತಿ ನಮಗೆ ಅತ್ಯಂತ ಮುಖ್ಯವಾಗಿದೆ. ವಂಚನೆಯ ಘಟನೆ ಪತ್ತೆಹಚ್ಚಿದ ತಕ್ಷಣ, ನಾವು ಪೊಲೀಸರಿಗೆ ಎಫ್ಐಆರ್ ದಾಖಲಿಸಿದ್ದೇವೆ. ಯಾವುದೇ ವಂಚನೆಯ ಚಟುವಟಿಕೆ ವಿರುದ್ಧ ನಾವು ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದೇವೆ. ಹೀಗಾಗಿ ವಂಚನೆಯಲ್ಲಿ ಶಾಮೀಲಾಗಿರುವ ಉದ್ಯೋಗಿಯನ್ನು ಅಮಾನತುಗೊಳಿಸಿದ್ದೇವೆ. ವಂಚನೆಗೊಳಗಾದ ಗ್ರಾಹಕರ ಹಣವನ್ನು ಶೀಘ್ರವೇ ಮರಳಿಸುವುದಾಗಿ ನಾವು ಭರವಸೆ ನೀಡಲು ಬಯಸುತ್ತೇವೆ ಎಂದು ಐಸಿಐಸಿಐ ಬ್ಯಾಂಕ್ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.