ಮಗಳ ಮದುವೆ ಕನಸು ನುಚ್ಚುನೂರು: RCB ಸಂಭ್ರಮದ ನಡುವೆ ಸಹನಾ ಕಾಲ್ತುಳಿತದಲ್ಲಿ ಬಲಿ

ಕೋಲಾರ: ಮಗಳಿಗೆ ಮದುವೆ ಮಾಡಬೇಕು ಎಂದುಕೊಂಡಿದ್ದೆವು. ಈಗ ಅವಳೇ ಇಲ್ಲ. ನಮಗಾದ ಕಷ್ಟ ಯಾವ ತಂದೆ-ತಾಯಿಗೂ ಬರುವುದು ಬೇಡ ಎಂದು ಕಾಲ್ತುಳಿತಕ್ಕೆ ಮೃತಪಟ್ಟ ಟೆಕ್ಕಿ ಸಹನಾ ತಂದೆ ಕಣ್ಣೀರಿಟ್ಟಿದ್ದಾರೆ.

ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿ ಕೆಲಸ ಮಾಡ್ತಾ ಇದ್ದಳು. ತಂದೆ-ತಾಯಿ ಮಾತು ಮೀರದೆ ಒಳ್ಳೆಯ ಮಗಳಾಗಿದ್ದಳು. ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಳು. ಮದುವೆ ಕೂಡ ಮಾಡಬೇಕು ಎಂದುಕೊಂಡಿದ್ದೆವು. ನಿನ್ನೆ ನಮಗೆ ತಿಳಿಸಿ ಆರ್ಸಿಬಿ ವಿಜಯೋತ್ಸವಕ್ಕೆ ತೆರಳಿದ್ದಳು. ಈ ಮೊದಲು ಆರ್ಸಿಬಿ ಮ್ಯಾಚ್ ನೋಡೋದಕ್ಕೆ ಹೋಗಿದ್ದಳು. ಆದರೆ, ಕಾಲ್ತುಳಿತದಲ್ಲಿ ಅಮಾಯಕರು ಬಲಿಯಾಗಿದ್ದಾರೆ ಎಂದು ನೊಂದು ನುಡಿದಿದ್ದಾರೆ.
RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿದ್ದು ಸರ್ಕಾರದ ನಿರ್ಲಕ್ಷ್ಯದಿಂದ ಎಂದು ರಾಜ್ಯ ಸರ್ಕಾರದ ವಿರುದ್ಧ ಸಹನಾ ಪೋಷಕರ ಮತ್ತು ಸ್ನೇಹಿತರು ಆಕ್ರೋಶ ಹೊರಹಾಕಿದ್ದಾರೆ. ಮೃತ ಸಹನಾ, ಶಿಕ್ಷಕ ದಂಪತಿಯಾದ ಸುರೇಶ್ ಬಾಬು ಹಾಗೂ ಮಂಜುಳಾ ಮೊದಲನೇ ಪುತ್ರಿಯಾಗಿದ್ದರು.
ಒಂದೇ ಸಮಯದಲ್ಲಿ ಎರಡೂ ಕಡೆ ಸಂಭ್ರಮಾಚಾರಣೆ ಮಾಡಿದ್ದು ಸರಿ ಇಲ್ಲ. ಜನರು ಒಂದೇ ಸಮನೆ ನುಗ್ಗಿದ ಹಿನ್ನೆಲೆ ಅಮಾಯಕರು ಬಲಿಯಾಗಿದ್ದಾರೆ. ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ಸರಿಯಾದ ಪ್ಲಾನ್ ಮಾಡಿಕೊಳ್ಳದ ಕಾರಣ 11 ಜನ ಅಮಾಯಕರು ಬಲಿಯಾದರು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.