ವಾಹನ ತಯಾರಿಕೆಗೆ ಧಕ್ಕೆ: ಚೀನಾದಿಂದ ರೇರ್ ಅರ್ಥ್ ವಸ್ತುಗಳ ಸರಬರಾಜು ಸ್ಥಗಿತ

ನವದೆಹಲಿ: ಅಮೆರಿಕದ ಟ್ಯಾರಿಫ್ ತರಲೆಗಳ ಮಧ್ಯೆ ಚೀನಾದ ಅಪರೂಪ ಭೂಖನಿಜಗಳ ಆಟ ಶುರುವಿಚ್ಚುಕೊಂಡಿದೆ. ಮೊದಲೇ ಇದ್ದ ಜಾಗತಿಕ ಅನಿಶ್ಚಿತ ಸ್ಥಿತಿಗೆ ಈ ಎರಡು ದೇಶಗಳ ಹುಚ್ಚಾಟ ಮತ್ತಷ್ಟು ಡೋಲಾಯಮಾನವಾಗಿರಿಸಿದೆ. ಚೀನಾ ವಿಶ್ವದ ಫ್ಯಾಕ್ಟರಿ ಮಾತ್ರವೇ ಅಲ್ಲ, ಹಲವು ಕಚ್ಛಾ ವಸ್ತುಗಳ ಪ್ರಮುಖ ಸರಬರಾಜುದಾರ ದೇಶವಾಗಿದೆ. ಹೀಗಾಗಿ, ಜಗತ್ತಿನ ಹಲವ ದೇಶಗಳು ಒಂದಿಲ್ಲ ಒಂದು ರೀತಿಯಲ್ಲಿ ಚೀನಾ ಮೇಲೆ ಅವಲಂಬಿತವಾಗಿವೆ. ಹಲವು ದಶಕಗಳಿಂದ ಮಾಡುತ್ತಾ ಬಂದಿದ್ದ ವಿವಿಧ ಪ್ರಯೋಗ, ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆಗಳ ಫಲದಿಂದ ಚೀನಾ ಇವತ್ತು ವಿಶ್ವದ ದೊಡ್ಡಣ್ಣನಿಗಿಂತ ಒಂದು ಕೈ ಮೇಲಿರಿಸಿದೆ.
ಉತ್ಪಾದನೆಯನ್ನೇ ನಿಲ್ಲಿಸಿರುವ ಭಾರತದ ವಾಹನ ತಯಾರಕರು…
ಚೀನಾ ದೇಶ ರೇರ್ ಅರ್ತ್ ವಸ್ತುಗಳ ಸರಬರಾಜು ಮೇಲೆ ನಿರ್ಬಂಧ ಹೇರಿದೆ. ರೇರ್ ಅರ್ತ್ ಮ್ಯಾಗ್ನೆಟ್ಗಳು ಚೀನಾದಿಂದ ಭಾರತಕ್ಕೆ ಬರುತ್ತಿಲ್ಲ. ಇದಾದ ಬಳಿಕ ಭಾರತದಲ್ಲಿ ವಾಹನಾ ತಯಾರಕರು ಕೈಕಟ್ಟಿ ಕೂರುವಂತಾಗಿದೆ. ವಾಹನ ತಯಾರಿಕೆಗೆ ಈ ರೇರ್ ಅರ್ಥ್ ಮ್ಯಾಗ್ನೆಟ್ಗಳು ವಾಹನ ತಯಾರಿಸಲು ಬೇಕಾಗುತ್ತವೆ.
ರೇರ್ ಅರ್ತ್ ಎಲಿಮೆಂಟ್ಸ್, ಅಥವಾ ವಿರಳ ಭೂಖನಿಜಗಳು ಬಹಳ ಬೇಡಿಕೆಯಲ್ಲಿವೆ. ಸ್ಮಾರ್ಟ್ಫೋನ್ಗಳಿಂದ ಹಿಡಿದು ಫೈಟರ್ ಜೆಟ್ಗಳವರೆಗೆ ವಿವಿಧ ಉತ್ಪನ್ನಗಳ ತಯಾರಿಕೆಗೆ ಈ ವಸ್ತುಗಳು ಬಹಳ ಅಗತ್ಯ. ಅದರಲ್ಲೂ ಎಲೆಕ್ಟ್ರಿಕ್ ವಾಹನ, ಸೌರಶಕ್ತಿ, ಡಿಫೆನ್ಸ್ ಉದ್ಯಮಗಳಿಗೆ ಈ ವಸ್ತುಗಳ ಬಹಳ ಅಗತ್ಯ ಇದೆ. ಇವುಗಳ ಅಯಸ್ಕಾಂತವು ಮಾಮೂಲಿಯ ಮ್ಯಾಗ್ನೆಟ್ಗಿಂತ ಬಹಳ ಶಕ್ತಿಶಾಲಿ. ಮ್ಯಾಗ್ನೆಟ್ ಅಗತ್ಯ ಇರುವ ಹಲವು ಉಪಕರಣಗಳಿಗೆ ಇವು ಬೇಕಾಗುತ್ತದೆ.
ಏನಿವು ರೇರ್ ಅರ್ತ್ ವಸ್ತುಗಳು?
ನೀವು ರಸಾಯನಶಾಸ್ತ್ರದಲ್ಲಿ ಬರುವ ಪೀರಿಯಾಡಿಕ್ ಟೇಬಲ್ ನೋಡಿರಬಹುದು. ಅಲ್ಲಿ 57ರಿಂದ 71ರವರೆಗೆ ಬರುವ ವಸ್ತುಗಳು ಅಪರೂಪದ ಖನಿಜಗಳೆಂದು ಪರಿಗಣಿಸಲ್ಪಡುತ್ತವೆ. ಇವುಗಳು ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇರುತ್ತವೆ. ಆದರೆ, ಒಟ್ಟೊಟ್ಟಿಗೆ ಇವುಗಳ ಲಭ್ಯ ಇರುವುದಿಲ್ಲ. ಎಲ್ಲವೂ ಚದುರಿ ಹೋಗಿರುತ್ತವೆ. ಅವುಗಳನ್ನು ಹುಡುಕಿ, ಸಂಸ್ಕರಿಸಿ ಅಂತಿಮ ರೂಪಕ್ಕೆ ತರಲು ಬಹಳ ಸಮಯ ಮತ್ತು ಹಣದ ವ್ಯಯವಾಗುತ್ತದೆ. ಹೀಗಾಗಿ, ಇವುಗಳನ್ನು ವಿರಳ ಭೂ ಖನಿಜಗಳೆಂದು ಸೂಚ್ಯವಾಗಿ ಹೇಳಲಾಗುತ್ತದೆ.
ವಿರಳ ಭೂಖನಿಜಗಳ ಸಂಸ್ಕರಣೆ ವೇಳೆ ಸೃಷ್ಟಿಯಾಗುವ ಕಸವು ಪರಿಸರಕ್ಕೆ ಹಾನಿ ಮಾಡುವಂಥದ್ದು. ಹೀಗಾಗಿ, ಬಹಳಷ್ಟು ಮುಂದುವರಿದ ದೇಶಗಳು ಈ ಕೊಳಕು ಕೆಲಸಕ್ಕೆ ಕೈಹಾಕಿರಲಿಲ್ಲ. ಈ ಖಾಲಿ ಬಿದ್ದ ಜಾಗವನ್ನು ಚೀನಾ ಬಹಳ ಬೇಗ ಭರ್ತಿ ಮಾಡಿತು. ಸಂಶೋಧನೆ, ಹಣ ಎಲ್ಲವನ್ನೂ ಅದು ವ್ಯಯಿಸಿ ಈಗ ವಿಶ್ವಕ್ಕೆ ಅಗತ್ಯವಾದ ಶೇ. 70ರಷ್ಟು ಖನಿಜಗಳನ್ನು ಇದು ಸರಬರಾಜು ಮಾಡುತ್ತದೆ.
ಭಾರತದಿಂದ ಮೂರು ಪರ್ಯಾಯ ಮಾರ್ಗಗಳ ಆಲೋಚನೆ…
ವಿಶ್ವದ ಶೇ. 6ರಷ್ಟು ವಿರಳ ಭೂಖನಿಜಗಳು ಭಾರತದ ಪ್ರದೇಶಗಳಲ್ಲಿ ಇವೆ. ಆದರೆ, ಉತ್ಪಾದನೆ ವಿಚಾರ ಬಂದಾಗ ಅದು ಶೇ. 0.25 ಮಾತ್ರವೇ ಇರುವುದು. ಹೀಗಾಗಿ, ವಿರಳ ಭೂ ಖನಿಜಗಳಿಗಾಗಿ ಚೀನಾ ಮೇಲೆ ಭಾರತ ಅವಲಂಬಿತವಾಗಿಹೋಗಿದೆ.
ಈಗ ಈ ಅವಲಂಬನೆ ಕಡಿಮೆ ಮಾಡಲು ಭಾರತ ಮೂರು ಮಾರ್ಗೋಪಾಯಗಳನ್ನು ಅವಲೋಕಿಸಿದೆ. ಈ ಖನಿಜಗಳನ್ನು ಉಪಯೋಗಿಸಿ ತಯಾರಾದ ವಸ್ತುಗಳ ಕಾಲಾವಧಿ ಮುಗಿದ ಬಳಿಕ ತ್ಯಾಜ್ಯಕ್ಕೆ ಬಿಸಾಡದೆ ರೀಸೈಕ್ಲಿಂಗ್ ಮಾಡುವುದು ಮೊದಲನೆಯ ಮಾರ್ಗ. ಭಾರತ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ.
ಎರಡನೇ ಮಾರ್ಗ ಎಂದರೆ ಚೀನಾ ಬಿಟ್ಟು ಬೇರೆ ದೇಶಗಳಿಂದ ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು. ಥಾಯ್ಲೆಂಡ್, ಕಜಕಸ್ತಾನ್ ಇತ್ಯಾದಿ ದೇಶಗಳು ಪರ್ಯಾಯ ಎನಿಸಬಹುದು. ಕಜಕಸ್ತಾನದೊಂದಿಗೆ ಭಾರತದ ಉತ್ತಮ ವ್ಯಾಪಾರ ಸಂಬಂಧ ಇದೆ. 17 ವಿರಳ ಭೂಖನಿಗಳ ಪೈಕಿ 15 ಖನಿಜಗಳು ಕಜಕಸ್ತಾನದಲ್ಲಿ ಸಮೃದ್ಧವಾಗಿವೆಯಂತೆ.
ಇನ್ನು, ಕೊನೆಯ ಮಾರ್ಗವೆಂದರೆ ಖುದ್ದಾಗಿ ಈ ವಸ್ತುಗಳನ್ನು ಉತ್ಪಾದಿಸುವುದು. ಇದಕ್ಕಾಗಿ ಆರ್ ಅಂಡ್ ಡಿ ಸೌಲಭ್ಯ ಸೃಷ್ಟಿಸಬೇಕು. ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಭಾರತದಲ್ಲಿ ಆರೇಳು ದಶಕಗಳ ಹಿಂದೆಯೇ ಈ ಖನಿಜಗಳ ಉತ್ಪಾದನೆಗೆ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಇಂಥವೇ ಕಾರಣಗಳಿಂದ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈಗ ಸರ್ಕಾರದ ಗಮನ ಮತ್ತೆ ಅತ್ತ ಹೊರಳುತ್ತಿದೆ.