ಈ ಸಲ ಕಪ್ ನಮ್ದು: ಆರ್ಸಿಬಿ ಅಭಿಮಾನಿಗಳಿಂದ ನಗರದಲ್ಲಿ ವಿಜಯೋತ್ಸವ, 400 ಜನರಿಗೆ ಉಚಿತ ಪಾನಿಪೂರಿ

ಸಾಗರ: ಐಪಿಎಲ್ ಫೈನಲ್ಸ್ ಪಂದ್ಯದಲ್ಲಿ ಆರ್ಸಿಬಿ ತಂಡ ಗೆಲುವು ಸಾಧಿಸುತ್ತಿದ್ದಂತೆ ನಗರದ ವಿವಿಧೆಡೆ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಪಂಜಾಬ್ ಕಿಂಗ್ಸ್ನ ಒಂದೊಂದು ವಿಕೆಟ್ ಪತನಗೊಳ್ಳುತ್ತಿದ್ದಂತೆ ಸಿಡಿಸುತ್ತಿದ್ದ ಪಟಾಕಿ ಸದ್ದು ಜೋರಾಗಿತ್ತು.
ಅನೇಕ ವೃತ್ತಗಳಲ್ಲಿ ಯುವಕರು ವಿರಾಟ್ ಕೊಹ್ಲಿ ಭಾವಚಿತ್ರದೊಂದಿಗೆ ನರ್ತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ತೆರೆದ ವಾಹನಗಳಲ್ಲಿ ಮಕ್ಕಳು ಸಹಿತ ಆರ್ಸಿಬಿ… ಆರ್ಸಿಬಿ… ಘೋಷಣೆ ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ್ದ ದೃಶ್ಯ ಎಲ್ಲೆಡೆ ಕಾಣಬಹುದಾಗಿತ್ತು. ಅಗ್ರಹಾರ ವೃತ್ತದ ಸದ್ಗುರು ಹೋಟೆಲ್ನಲ್ಲಿ ಆರ್ಸಿಬಿ ಫೈನಲ್ ತಲುಪಿದ ಕಾರಣಕ್ಕೆ ಸಾರ್ವಜನಿಕರಿಗೆ ಉಚಿತವಾಗಿ ಚಹಾ ವಿತರಿಸಲಾಗಿತ್ತು.
ಬುಧವಾರ ನಗರದ ವಿವಿಧೆಡೆ ಆರ್ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದು’ ಘೋಷ ವಾಕ್ಯವಿರುವ ಬ್ಯಾನರ್ ಅಳವಡಿಸುವ ಮೂಲಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಗರದ ಅಶೋಕ ವೃತ್ತದಲ್ಲಿರುವ ಕಾಲಭೈರೇಶ್ವರ ಪಾನಿಪೂರಿ ಅಂಗಡಿಯ ಮಾಲೀಕ, ಆರ್ಸಿಬಿ ಅಭಿಮಾನಿ ಪ್ರಕಾಶ್ ಜನರಿಗೆ ಉಚಿತವಾಗಿ ಪಾನಿಪೂರಿ ವಿತರಿಸಿದರು.
‘ಸಾರ್ವಜನಿಕರಿಗೆ ಉಚಿತವಾಗಿ ಪಾನಿಪೂರಿ, ಮಸಾಲಪೂರಿ ನೀಡಲಾಗುತ್ತಿದೆ. 400 ಜನರಿಗಾಗುವಷ್ಟು ಪಾನಿಪೂರಿ ಸಿದ್ಧಪಡಿಸಲಾಗಿದೆ. 18 ವರ್ಷಗಳಿಂದಲೂ ನಾನು ಆರ್ಸಿಬಿ ತಂಡದ ಗೆಲುವು ನಿರೀಕ್ಷಿಸುತ್ತಿದ್ದೆ. ಈ ವರ್ಷ ಅದು ಕೈಗೂಡಿದೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ’ ಎಂದು ಪ್ರಕಾಶ್ ತಿಳಿಸಿದರು.