ಕಾಡಾನೆಯ ದಾಳಿ ಭೀತಿ: ತೀರ್ಥಹಳ್ಳಿಯಲ್ಲಿ ಶಾಲೆ-ಅಂಗನವಾಡಿಗೆ ರಜೆ

ಕುಂದಾಪುರ: ರೆಡಿಯೋ ಕಾಲರ್ ಆಳವಡಿಸಿರುವ ಒಂಟಿ ಸಲಗವೊಂದು ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ. ಅಲ್ಲದೆ ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರೌಢಶಾಲೆಗಳವರೆಗೆ ರಜೆ ಪೋಷಣೆ ಮಾಡಲಾಗಿದೆ. ಬುಧವಾರ ನಡೆಯಬೇಕಿದ್ದ ವಾರದ ಸಿದ್ದಾಪುರ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ.
ರೆಡಿಯೋ ಕಾಲರ್ ಹೊಂದಿದ ಒಂಟಿ ಸಲಗವು ಮಂಗಳವಾರ ಉಡುಪಿ- ಶಿವಮೊಗ್ಗ ಜಿಲ್ಲೆ ಗಡಿ ಪ್ರದೇಶವಾಗಿರುವ ನಗರ ಅರಣ್ಯ ವ್ಯಾಪ್ತಿಯ ಹುಲಿಕಲ್ ಚೆಕ್ಪೋಸ್ಟ್ ಬಳಿ ಕಾಣಿಸಿಕೊಂಡಿದೆ. ಬಾಳೆಬರೆ ಘಾಟಿಯ ಶ್ರೀಚಂಡಿಕಾಂಬ ದೇವಸ್ಥಾನ ಕೆಳಭಾಗದ ಕಾಡು ಪ್ರದೇಶದಲ್ಲಿ ಸಂಚರಿಸಿರುವ ಈ ಆನೆಯು ಕುಂದಾಪುರ-ಸಿದ್ದಾಪುರ- ಹೊಸಂಗಡಿ-ಹುಲಿಕಲ್ ಘಾಟಿ(ಬಾಳೆಬರೆ) ಮೂಲಕ ತೀರ್ಥಹಳ್ಳಿ-ಶಿವಮೊಗ್ಗ ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಓಡಾಟ ನಡೆಸಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಈ ಆನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆನೆಯ ಸಂಚಾರವನ್ನು ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್ನ ಸಿಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಹಾಸನ ಕಾಡಿನ ಆನೆ ಕಾರಿಡಾರ್ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಸುಮಾರು 12 ವರ್ಷ ಪ್ರಾಯದ ಗಂಡು ಕಾಡಾನೆಯು ದಾರಿ ತಪ್ಪಿ ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎಂದು ಹೇಳಲಾಗಿದೆ.
