ಪೂರ್ವ ಮುಂಗಾರಿನ ಸಂತಸ: ಕಬಿನಿ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯ ಹಂತಕ್ಕೆ

ಮೈಸೂರು: ಕಾವೇರಿಕೊಳ್ಳದಲ್ಲಿ ಪೂರ್ವ ಮುಂಗಾರಿನ ಸಂತಸ ಸೃಷ್ಟಿಯಾಗಿದೆ, ಕೇವಲ ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದುನಿಂತಿದೆ.
ಹೆಚ್.ಡಿ ಕೋಟೆ ತಾಲೂಕು ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯ ಕೇವಲ ಹತ್ತೇ ದಿನದಲ್ಲಿ ಭರ್ತಿಯ ಹಂತಕ್ಕೆ ಬಂದಿದೆ. ಮುಂಜಾಗೃತ ಕ್ರಮವಾಗಿ ಕಬಿನಿ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಇನ್ನೂ ಕೇರಳದ ವಯನಾಡಿನಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸದ್ಯ ಜಲಾಶಯಕ್ಕೆ 18,018 ಕ್ಯೂಸೆಕ್ ಒಳ ಹರಿವು ಇದೆ. ಒಟ್ಟು 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,280 ಅಡಿ ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯಕ್ಕೆ 7,992 ಕ್ಯೂಸೆಕ್ ಒಳಹರಿವು:
ಇನ್ನೂ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಜೀವನದಿ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ. ಸಕಲೇಶಪುರ, ಆಲೂರು ಭಾಗದಲ್ಲಿ ಮಳೆಯಾಗುತಿದ್ದು, ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಹಾಸನ, ಬೇಲೂರು, ಅರಕಲಗೂಡು ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ 7,992 ಕ್ಯೂಸೆಕ್ ಒಳಹರಿವಿದೆ.
37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 23.661 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಯಿಂದ 3,875 ಕ್ಯೂಸೆಕ್ ಹೊರಹರಿವಿದೆ. ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2905.85 ಅಡಿಯಿದೆ.