ಕೋಟಿ ಗೆದ್ದು… ಊರು ಬಿಟ್ಟ ಶಂಕರ್”: ಲಾಟರಿಯಿಂದ ಕೋಟ್ಯಧಿಪತಿಯಾದ ಕಾರ್ಮಿಕನ ಕಥೆ

ಪಶ್ಚಿಮ ಬಂಗಾಳ: ಕೆಲವರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ. ಆದರೆ ಒಮ್ಮೆಗೆ ಬಂದ ಯಶಸ್ಸನ್ನು ನಿಭಾಯಿಸುವುದರಲ್ಲಿ ಎಡವುತ್ತಾರೆ. ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಲಾಟರಿ ಟಿಕೆಟ್ ಖರೀದಿಸಿ ಕೋಟಿ ಗೆದ್ದಾತನ ಕಥೆ – ವ್ಯಥೆ ಇದು.
ಶಾಂತಿಪುರದ ಬೈಗಚಿ ಪಾರಾ ನಿವಾಸಿ ಶಂಕರ್ ಎನ್ನುವವರು ಇತ್ತೀಚೆಗೆ 60 ರೂಪಾಯಿ ಲಾಟರಿ ಟಿಕೆಟ್ ಖರೀದಿಸಿದ್ದರು. ಆಗಾಗ ತನ್ನ ಅದೃಷ್ಟ ಪರೀಕ್ಷಿಸಲು ಲಾಟರಿ ಟಿಕೆಟ್ಗಳನ್ನು ಖರೀದಿಸುವ ಶಂಕರ್ ಅದೇ ರೀತಿ ಇತ್ತೀಚೆಗೆ ಲಾಟರಿಯೊಂದನ್ನು ಖರೀದಿಸಿದ್ದರು. ಅದೃಷ್ಟಕ್ಕೆ ಈ ಲಾಟರಿಗೆ 1 ಕೋಟಿ ರೂ. ಬಂಪರ್ ಬಂದಿದೆ. ಆ ಮೂಲಕ ದಿನಗೂಲಿ ಕಾರ್ಮಿಕನಾಗಿದ್ದ ಶಂಕರ್ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ.
ಕೋಟಿ ಗೆದ್ದ ಖುಷಿಯ ನಡುವೆ ಭೀತಿ:
ಪಶ್ಚಿಮ ಬಂಗಾಳದ ನಾಡಿಯಾದ ಶಾಂತಿಪುರದ ದಿನಗೂಲಿ ಕಾರ್ಮಿಕನೊಬ್ಬ ಲಾಟರಿ ಟಿಕೆಟ್ನಲ್ಲಿ ಕೋಟಿ ಗೆದ್ದು ಅದೃಷ್ಟ ಖುಲಾಯಿಸಿಕೊಂಡಿದ್ದಾನೆ.
ಲಾಟರಿಯಲ್ಲಿ 1 ಕೋಟಿ ಗೆದ್ದ ಖುಷಿ ಒಂದು ಕಡೆಯಾದರೆ, ಶಂಕರ್ಗೆ ಅಷ್ಟು ದೊಡ್ಡ ಹಣವನ್ನು ಹೇಗೆ ಉಳಿಸಿಕೊಳ್ಳುವುದು ಎನ್ನುವ ಚಿಂತೆ ಕಾಡಿದೆ. ಸಾಮಾನ್ಯವಾಗಿ ಕೆಲವರು ಲಾಟರಿ ಗೆದ್ದ ಬಳಿಕ ರಕ್ಷಣೆಗೆ ಪೊಲೀಸರ ಮೊರೆ ಹೋಗುತ್ತಾರೆ. ಆದರೆ ಶಂಕರ್ ಮನೆಯಿಂದ ಹೊರಗೆಯೇ ಬಾರದೆ, ಒಳಗಡೆಯೇ ಇರುತ್ತಿದ್ದರು. ರಾತ್ರಿ ಸರಿಯಾಗಿ ಮಲಗಲು ಆಗದೆ, ಲಾಟರಿ ಡ್ರಾ ಆದ ಬಗ್ಗೆ ಯೋಚಿಸುತ್ತಿದ್ದರು. ಒಂದು ರೀತಿಯಲ್ಲಿ ಭೀತಿಯಲ್ಲೇ ಶಂಕರ್ ಮನೆಯಲ್ಲಿದ್ದರು. ಯಾರ ಕಣ್ಣಿಗೂ ಬೀಳದೆ ಮನೆಯಲ್ಲಿದ್ದ ಶಂಕರ್, ರಾತ್ರಿಯ ವೇಳೆಗೆ ಮನೆಯಿಂದ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಹೋಗಿದ್ದಾರೆ. ತನ್ನ ವೃದ್ಧ ತಾಯಿಯನ್ನು ಮಾತ್ರ ಮನೆಯಲ್ಲಿ ಬಿಟ್ಟು, ಕುಟುಂಬದ ಇತರರ ಜತೆ ಊರು ಬಿಟ್ಟು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
ಮರುದಿನ ಬೆಳಗ್ಗೆ ಶಂಕರ್ ಮತ್ತು ಅವರ ಸಹೋದರ ಶಾಂತಿಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗೆ ತಮ್ಮ ವ್ಯವಹಾರಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭೇಟಿ ನೀಡಿದ್ದರು. ಆದಾದ ಬಳಿಕ ಊರು ಬಿಟ್ಟು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.