ಮಲ್ಲಿಗೆ ರಫ್ತಿನಲ್ಲಿ ಏರ್ ಕಾರ್ಗೋ ಸಮಸ್ಯೆ: ರೈತರಿಗೆ ತೊಂದರೆ

ಮಂಗಳೂರು: ಪ್ರಸಿದ್ಧ ಶಂಕರಪುರ (ಉಡುಪಿ) ಮಲ್ಲಿಗೆ ಮುಬಯಿ ಹಾಗೂ ವಿದೇಶಕ್ಕೆ ರವಾನೆಗೆ ಪೂರಕವಾದ ವಿಮಾನಗಳಿಲ್ಲ !ಉಡುಪಿ ಮಲ್ಲಿಗೆಯನ್ನು ಹಲವು ವರ್ಷಗಳಿಂದ ದಿನವೊಂದಕ್ಕೆ 300ರಿಂದ 500 ಅಟ್ಟೆ (1,200ರಿಂದ 1,500 ಚೆಂಡು) ಮಲ್ಲಿಗೆ ಮುಂಬಯಿಗೆ, ಕೆಲವೊಮ್ಮೆ ವಿದೇಶಗಳಿಗೂ ಹೋಗುತ್ತಿತ್ತು.
ಆದರೆ ಕೋವಿಡ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ವೇಳೆ ಸಮರ್ಪಕ ಕಾರ್ಗೊ ಸೇವೆ ದೊರೆಯದೆ ತೊಂದರೆಯಾಗಿದೆ.
ಮಲ್ಲಿಗೆಯನ್ನು ನೇಯ್ದು ಸಿದ್ದಮಾಡಿದ ಕೂಡಲೇ ರವಾನಿಸಬೇಕು. ಅಂದರೆ ಬೆಳಗ್ಗೆ ಕೊಯ್ಯಲಾದ ಮಲ್ಲಿಗೆಯನ್ನು ನೇಯ್ದು ಮಧ್ಯಾಹ್ನದ ವೇಳೆಗೆ ಅದನ್ನು ರವಾನಿಸಬೇಕು. ಆದರೆ ಮಧ್ಯಾಹ್ನ ಮುಂಬಯಿಗೆ ತೆರಳುವ ಏರ್ ಇಂಡಿಯಾ ವಿಮಾನದಲ್ಲಿ ಕಾರ್ಗೊ ಸಾಗಿಸುತ್ತಿಲ್ಲ. ಜತೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರಿನಿಂದ ಡೊಮೆಸ್ಟಿಕ್ ಕಾರ್ಗೊ ಆರಂಭಿಸಿಲ್ಲ. ಹಾಗಾಗಿ ಮಲ್ಲಿಗೆ ರಫ್ತುದಾರರಿಗೆ ಸಮಸ್ಯೆಯಾಗಿದೆ. ಕೊರೊನಾಕ್ಕಿಂತ ಮೊದಲು ಈ ಸಮಸ್ಯೆ ಇರಲಿಲ್ಲ ಎನ್ನುತ್ತಾರೆ ಮಲ್ಲಿಗೆ ರಫ್ತುದಾರರು.
ಪ್ರಸ್ತುತ ಮಧ್ಯಾಹ್ನದ ವಿಮಾನದಲ್ಲಿ ಸರಕುಗಳನ್ನು ತರಲಾಗುತ್ತಿದೆ. ಆದರೆ ಮಂಗಳೂರಿನಿಂದ ಕೊಂಡೊಯ್ಯುತ್ತಿಲ್ಲ. ಸಂಜೆ ವಿಮಾನಗಳು ಸರಕು ಸಾಗಾಟಕ್ಕೆ ಲಭ್ಯವಿದೆ. ಆದರೆ ಐಸ್ ಬಾಕ್ಸ್ ನಲ್ಲಿ ಕಳುಹಿಸಲು ಅವಕಾಶವಿಲ್ಲ. ಹಾಗಾಗಿ ಮಲ್ಲಿಗೆ ಹಾಳಾಗುತ್ತಿದೆ. ಈ ಸಂಬಂಧ ವಾಯುಯಾನ ಸಂಸ್ಥೆಯ ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದಾಗ, ಮಧ್ಯಾಹ್ನದ ವಿಮಾನದಲ್ಲಿ ಕಾರ್ಗೋ ಸಾಗಣೆಗೆ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಬಸ್ನಲ್ಲಿ ಐಸ್ಬಾಕ್ಸ್ನಲ್ಲಿಟ್ಟು ಸ್ವಲ್ಪ ಪ್ರಮಾಣದಲ್ಲಿ ಸಾಗಿಸಲಾಗುತ್ತಿದೆ.
ಒಂದೂವರೆ ಗಂಟೆ ಬದಲು 20 ತಾಸು
ವಿಮಾನದ ಮೂಲಕ ಮುಂಬಯಿಗೆ ಒಂದೂವರೆ ತಾಸಿನಲ್ಲಿ ರವಾನಿಸಲು ಆಗುತ್ತಿತ್ತು. ಬಸ್ ಅಥವಾ ಇತರ ವಾಹನಗಳಲ್ಲಿ ಸಾಗಿಸುವುದಾದರೆ ಹೆಚ್ಚು ಕಡಿಮೆ ಒಂದು ದಿನ ಬೇಕು. ಇದರಿಂದ ಮಲ್ಲಿಗೆಯ ಗುಣಮಟ್ಟ ಹಾಳಾಗುತ್ತದೆ. ಮಾರುಕಟ್ಟೆಯ ಮೇಲೆಯೂ ಹೊಡೆತ ಬೀಳುತ್ತದೆ. ಹಾಗಾಗಿ ಕಾರ್ಗೋ ಸಾಗಣೆಗೆ ಅವಕಾಶ ಬೇಕು ಎಂಬುದು ಮಲ್ಲಿಗೆ ಪೂರೈಕೆದಾರರ ದೂರು.
ಆಗ 1,500 ಚೆಂಡು, ಈಗ 400 ಚೆಂಡು!
ಈ ಹಿಂದೆ ವಿಮಾನದಲ್ಲಿ ಕಾರ್ಗೊ ಸೇವೆ ಸಮರ್ಪಕವಾಗಿದ್ದಾಗ ಮುಂಬಯಿಗೆ ದಿನವೊಂದಕ್ಕೆ 1,500 ಚೆಂಡು ಮಲ್ಲಿಗೆ ರವಾನಿಸಲಾಗುತ್ತಿತ್ತು. ಈಗ ಬಸ್ನಲ್ಲಿ ಹೆಚ್ಚೆಂದರೆ 400 ಚೆಂಡು ಹೂ ರವಾನಿಸಲಾಗುತ್ತಿದೆ. ದಿನಕ್ಕೆ ಲಕ್ಷಕ್ಕೂ ಮಿಕ್ಕಿದ ವ್ಯವಹಾರ ನಡೆಯುತ್ತಿತ್ತು. ಈಗ ಆ ಪ್ರಮಾಣ ಕಡಿಮೆಯಾಗಿದೆ. ಸಾಮಾನ್ಯವಾಗಿ ಮಲ್ಲಿಗೆ ದರ ನಿರ್ಧಾರವಾಗುವುದು ಲಭ್ಯತೆ ಹಾಗೂ ಮಾರುಕಟ್ಟೆಯ ಬೇಡಿಕೆ ಆಧರಿಸಿ. ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಒಂದು ಅಟ್ಟೆಗೆ (ನಾಲ್ಕು ಚೆಂಡು) 2 ರಿಂದ 2,500 ರೂ. ವರೆಗೂ ಏರಿಕೆ ಆಗುವುದಿದೆ.
ಕಾರ್ಗೊ ತೆಗೆದುಕೊಳ್ಳುತ್ತಿಲ್ಲ
ಮಧ್ಯಾಹ್ನದ ವಿಮಾನದಲ್ಲಿ ಮಲ್ಲಿಗೆ ಕಳುಹಿಸುತ್ತಿದ್ದೆವು. ಆದರೆ ಕೊರೊನಾ ಅನಂತರ ಸಮಸ್ಯೆಯಾಗಿದೆ. ಮಲ್ಲಿಗೆಗೆ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡಿದರೆ ಮಲ್ಲಿಗೆ ಬೆಳೆಗಾರರಿಗೂ ಅನುಕೂಲವಾ ಗುತ್ತದೆ. ಮಧ್ಯಾಹ್ನದ ವಿಮಾನದಲ್ಲಿ ಕಾರ್ಗೋ ತೆಗೆದುಕೊಳ್ಳುವಂತೆ ವಿನಂತಿಸಿದ್ದು, ಏರ್ಲೈನ್ಸ್ ಅಧಿಕಾರಿಗಳು ಆರಂಭಿಸುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಆರಂಭವಾಗಬೇಕು.