ಪ್ರಜ್ವಲ್ ರೇವಣ್ಣ ವಿರುದ್ಧ ಹೊಸ ಆಘಾತ: ಡ್ರೈವರ್ ಕಾರ್ತಿಕ್ ನುಡಿದ ಸ್ಫೋಟಕ ಸತ್ಯಗಳು

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಇತ್ತ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್ ಕೋರ್ಟ್ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು ಎಂದು ಕಾರ್ತಿಕ್, ಇಂದು (ಮೇ 26) ಜನಪ್ರತಿನಿಧಿಗಳ ವಿಶೇಷ ಕೋ ಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹೇಗೆ ಸಿಕ್ಕವು ಎನ್ನುವ ಬಗ್ಗೆ ಕೋರ್ಟ್ ಮುಂದೆ ಹೇಳಿದ್ದಾರೆ.
ಕೋರ್ಟ್ ಮುಂದೆ ಕಾರ್ತಿಕ್ ನೀಡಿರುವ ಹೇಳಿಕೆ ಇಲ್ಲಿದೆ
2009ರಿಂದ ಹೆಚ್.ಡಿ.ರೇವಣ್ಣ ಬಳಿ ಡ್ರೈವರ್ ಆಗಿದ್ದೆ. ನಂತರ ಭವಾನಿ ರೇವಣ್ಣ, ಸೂರಜ್ ರೇವಣ್ಣ ಕಾರಿಗೂ ಚಾಲಕನಾಗಿದ್ದೆ. 2018ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ.ಆ ಸಂದರ್ಭದಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು ಎಂದು ಕೊರ್ಟ್ ಮುಂದೆ ಸಾಕ್ಷ್ಯ ನುಡಿದಿದ್ದಾರೆ.
ಪ್ರಜ್ವಲ್ ರೇವಣ್ಣ ಮೊಬೈಲ್ ಪಾಸ್ ವರ್ಡ್ ನನಗೆ ತಿಳಿದಿತ್ತು. ಒಂದು ದಿನ ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು.ಆಗ ಮೊಬೈಲ್ ತೆಗೆದು ನೋಡಿದಾಗ ಅಶ್ಲೀಲ ಫೋಟೋ, ವಿಡಿಯೋಗಳಿದ್ದವು. 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು. ಭವಾನಿ ರೇವಣ್ಣರಿಗೆ ತೋರಿಸಲೆಂದು ವಿಡಿಯೋಗಳನ್ನು ವರ್ಗಾಯಿಸಿಕೊಂಡೆ. ಮಗನಿಗೆ ಬುದ್ದಿ ಹೇಳಲಿ ಎಂದು ಭವಾನಿ ರೇವಣ್ಣರಿಗೆ ಮಾಹಿತಿ ನೀಡಿದ್ದೆ ಎಂದಿದ್ದಾರೆ.
ಆಗ ಭವಾನಿ ರೇವಣ್ಣ ಅವರು ಫೋಟೋ, ವಿಡಿಯೋ ತಮಗೆ ಕಳುಹಿಸಲು ಕೋರಿದ್ದರು. ಅಲ್ಲದೇ ಬೇರೆಲ್ಲೂ ಈ ವಿಷಯ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ರೇವಣ್ಣ ಪ್ರಜ್ವಲ್ ಜೊತೆ ಮಾತು ಬಿಟ್ಟಿದ್ದರು. ಹುಟ್ಟುಹಬ್ಬಕ್ಕೆ ಭವಾನಿ ಶುಭ ಕೋರಿದಾಗ ಪ್ರಜ್ವಲ್ ಪ್ರತಿಕ್ರಿಯಿಸಲಿಲ್ಲ. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಭವಾನಿ ನನ್ನ ಹೆಸರು ಹೇಳಿದ್ದರು. ಆಗ ಫೋನ್ ಮಾಡಿ ಪ್ರಜ್ವಲ್ ತನಗೆ ಬೈದಿದ್ದಾರೆ ಎಂದು ಚಾಲಕ ಕಾರ್ತಿಕ್ ಕೋರ್ಟ್ ಮುಂದೆ ಹೇಳಿದ್ದಾರೆ.
ವಿಡಿಯೋ ಬಹಿರಂಗಗೊಂಡಿದ್ಹೇಗೆ?
ನಮ್ಮ ನಡುವೆ ಜಗಳವಾಗಿ 2022ರಲ್ಲಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡಾ ಹಾಕಿದ್ದೆ.ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸದಂತೆ ತಡೆಯಾಜ್ಞೆ ತಂದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್ ನಲ್ಲಿ ನೀಡಿದೆ. ಆದ್ರೆ, ಚುನಾವಣೆ ವೇಳೆ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಕಾರ್ತಿಕ್, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾರೆ.