ಅರ್ಧಾಂಗಿ ಇಲ್ಲದ ಬದುಕು ಅಸಹನೀಯ: ಪತ್ನಿಯ ಪಕ್ಕದಲ್ಲೇ ಸಮಾಧಿ ಕಟ್ಟಿಸಿಕೊಂಡು ಆತ್ಮಹತ್ಯೆ ಮಾಡಿದ 80 ವರ್ಷದ ವ್ಯಕ್ತಿ

ತೆಲಂಗಾಣ: ಹೆಂಡತಿ ಎಂದರೆ ಜೀವನದ ಒಂದು ಪಾತ್ರವಲ್ಲ, ಗಂಡನ ಸುಖದ ಮೂಲ, ಅವನ ನೋವುಗಳನ್ನು ನಿವಾರಿಸುವ ಸಾಂತ್ವನ, ಪ್ರತಿ ಯಶಸ್ಸಿನ ಹಿಂದೆ ನಿಲ್ಲುವ ವ್ಯಕ್ತಿ. ಆಕೆ ಕುಟುಂಬವನ್ನು ನಿರ್ಮಿಸುವುದು ಮಾತ್ರವಲ್ಲ, ಸಂತೋಷದ ಜಗತ್ತನ್ನೇ ಸೃಷ್ಟಿಸುತ್ತಾಳೆ
ಹೆಂಡತಿಯು ತನ್ನ ಸಣ್ಣ ಕಾರ್ಯಗಳಿಂದಲೂ ಗಂಡನ ಜೀವನವನ್ನು ಶಾಂತ ಮತ್ತು ಸುಂದರವಾಗಿಸುತ್ತಾಳೆ. ಕಷ್ಟಕಾಲದಲ್ಲಿ ಧೈರ್ಯ ತುಂಬುವ ಸ್ನೇಹಿತೆಯಾಗಿ, ಮಾರ್ಗದರ್ಶಕಿಯಾಗಿ ಅವಳು ತೋರಿಸುವ ಪ್ರೀತಿ, ವಿಶ್ವಾಸ, ಕೊಡುವ ಬೆಂಬಲ ನಾವು ಜೀವನದಲ್ಲಿ ನಡೆಯುವ ದಾರಿಯನ್ನು ತೋರಿಸುತ್ತದೆ. ಒಂದು ಪದದಲ್ಲಿ ಹೇಳಬೇಕೆಂದರೆ ಅರ್ಧಾಂಗಿ ಎನಿಸಿಕೊಳ್ಳುವ ಹೆಂಡತಿಯು ಜೀವನದ ಹೃದಯ ಬಡಿತ ಇದ್ದಂತೆ. ಅವಳೇನಾದರೂ ಜೀವನದಿಂದ ಕಣ್ಮರೆಯಾದರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ. ತಮ್ಮ ಪತ್ನಿ ಕಳೆದುಕೊಂಡ ನೋವಿನಲ್ಲೇ ಎಷ್ಟೋ ಪುರುಷರು ಕೊನೆಯುಸಿರೆಳೆದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ.
ಕಳೆದ ಆರು ದಶಕಗಳ ಕಾಲ ತನ್ನ ಒಡನಾಡಿಯಾಗಿದ್ದ ಹೆಂಡತಿಯನ್ನು ಕಳೆದುಕೊಂಡಿದ್ದು 80 ವರ್ಷದ ವ್ಯಕ್ತಿಗೆ ಸಹಿಸಲಾಗಲಿಲ್ಲ. ಪತ್ನಿಯ ನೆನಪಿನಲ್ಲಿ ಆತ ಒಂದು ವರ್ಷ ಜೀವನ ನಡೆಸಿದ. ಪತ್ನಿಯಿಲ್ಲದ ಒಂದೊಂದು ದಿನವೂ ಆತನಿಗೆ ಒಂದೊಂದು ವರ್ಷ ಅನಿಸುತ್ತಿತ್ತು. ಅಲ್ಲದೆ, ಅನಾರೋಗ್ಯದಿಂದಲೂ ಆತ ಬಳಲುತ್ತಿದ್ದ. ಎಲ್ಲವನ್ನು ಸಹಿಸಲಾರೆ ಎಂದು ನಿರ್ಧರಿಸಿದ ಆತ ತನ್ನ ಸಾವನ್ನು ತಾನೇ ಬರೆದ. ಅದಕ್ಕೂ ಮೊದಲು ತನ್ನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ತನಗಾಗಿ ಒಂದು ಸಮಾಧಿಯನ್ನು ನಿರ್ಮಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಹನುಮಕೊಂಡ ಜಿಲ್ಲೆಯ ದಮೇರಾ ಮಂಡಲದ ಪುಲುಕುರ್ತಿ ಗ್ರಾಮದ ಕಾಸೆಟ್ಟಿ ಆದಿರೆಡ್ಡಿ (80) ಶುಕ್ರವಾರ (ಮೇ 23) ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆತನ ಪತ್ನಿ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ನಿಧನರಾದರು. ತನ್ನ ಕಷ್ಟ ಮತ್ತು ಸಂತೋಷಗಳನ್ನು ತನ್ನೊಂದಿಗೆ ಸಮಾನವಾಗಿ ಹಂಚಿಕೊಂಡಿದ್ದ ತನ್ನ ಹೆಂಡತಿಯ ನಷ್ಟವನ್ನು ಆದಿರೆಡ್ಡಿ ಸಹಿಸಲಾಗಲಿಲ್ಲ. ಅಲ್ಲದೆ, ಆತ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ. ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಗುಣಮುಖನಾಗಲಿಲ್ಲ. ಇದೆಲ್ಲದರಿಂದ ಬೇಸತ್ತ ಆದಿರೆಡ್ಡಿ ಇದೀಗ ಸಾವಿಗೆ ಶರಣಾಗಿದ್ದಾರೆ.
ಆದಿರೆಡ್ಡಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಾರೆ. ಒಂದು ತಿಂಗಳ ಹಿಂದಷ್ಟೇ ತನ್ನ ಕೃಷಿ ಭೂಮಿಯಲ್ಲಿ ತನ್ನ ಪತ್ನಿಯ ಪಕ್ಕದಲ್ಲೇ ತನಗಾಗಿ ಒಂದು ಸಮಾಧಿ ನಿರ್ಮಿಸಿದ್ದ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಆದಿರೆಡ್ಡಿ ತನ್ನದೇಯಾದ ಸಮಾಧಿಯನ್ನು ನಿರ್ಮಿಸಿಕೊಂಡ. ಪತ್ನಿ ಮತ್ತು ತನ್ನ ಪ್ರತಿಮೆಗಳನ್ನು ಅದರಲ್ಲಿ ಸ್ಥಾಪಿಸಿದ. ಪತ್ನಿಯ ನಷ್ಟವನ್ನು ಸಹಿಸಲಾಗದೆ, ಆಕೆಯ ನೆನಪಿನಲ್ಲೇ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದಿರೆಡ್ಡಿ ಅವರ ಎರಡನೇ ಮಗ ರವೀಂದರ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಎಸ್ಐ ತಿಳಿಸಿದ್ದಾರೆ.