ಅನಿಲ ರಹಿತ ದಿವ್ಯಾಂಗರಿಗೆ ಸಿಲಿಂಡರ್–ಸ್ಟೌವ್ ನೆರವು: ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನ

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್ಟೆಕ್ ಸಂಸ್ಥೆಗಳಿಗೆ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಪತ್ರ ಬರೆದಿದ್ದು, ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ, ಹೃದಯದ ಸ್ನಾಯು ಸಂಬಂಧಿ ಸಮಸ್ಯೆಗಳು 16-25 ವರ್ಷ ಪ್ರಾಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ, ಈ ಬಗ್ಗೆ ಔಷಧಿ ಲೇಬಲ್ನಲ್ಲಿ ಸಾರ್ವಜನಿಕ ಮಾಹಿತಿ ನೀಡಬೇಕು ಎಂದು ಹೇಳಿದೆ.
ಕಳೆದ ತಿಂಗಳು ಎಪ್ರಿಲ್ 17ರಂದು ಬರೆದಿರುವ ಪತ್ರದ ಮಾಹಿತಿ ಈಗ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ದಾಖಲಿಸುವ ಮೂಲಕ, ಔಷಧಿ ಲೇಬಲ್ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ, 30 ದಿನಗಳ ಒಳಗೆ ತನಗೆ ಸಲ್ಲಿಸುವಂತೆ USFDA ಆ ಕಂಪನಿಗಳಿಗೆ ಆದೇಶಿಸಿದೆ. ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯದ ಸ್ನಾಯುಗಳು ಮತ್ತು ಹೃದಯದ ಹೊರಕವಚದ ಉರಿಯೂತದ ಪ್ರಕರಣಗಳು ಹೆಚ್ಚಿರುವುದು ಅಧ್ಯಯನದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.
ಲಸಿಕೆ ಪಡೆದವರಲ್ಲಿ ಅಮೆರಿಕದ 38 ಆಸ್ಪತ್ರೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ 5-29 ವರ್ಷ ಪ್ರಾಯದವರಲ್ಲಿ 333 ರೋಗಿಗಳು ಮಯೊಕಾರ್ಡೈಟಿಸ್ (ಹೃದಯದ ಸ್ನಾಯುಗಳ ಉರಿಯೂತ) ಅಥವಾ, ಪೆರಿಕಾರ್ಡೈಟಿಸ್ (ಹೃದಯದ ಹೊರಕವಚದ ಉರಿಯೂತ) ಹೊಂದಿರುವುದು ಪತ್ತೆ ಆಗಿದ್ದು, ಅವರ ದೀರ್ಘಕಾಲಿಕ ಅಧ್ಯಯನದಲ್ಲಿ ಕೂಡ ಹೃದಯದ ಸ್ನಾಯುಗಳಿಗೆ ಹಾನಿ ಆಗಿರುವ ಚಿಹ್ನೆಗಳು ಕಂಡುಬಂದಿರುವ, ಹೃದಯದ ತೊಂದರೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಈ ಔಷಧಿ ದೀರ್ಘಕಾಲಿಕವಾಗಿ ಹೃದಯದ ಸ್ನಾಯುಗಳ ಉರಿಯೂತದ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂದು ಹೇಳುವುದು ಕಷ್ಟ. ಈ ನಿಟ್ಟಿನಲ್ಲಿ ಅಧ್ಯಯನಗಳು ಇನ್ನೂ ನಡೆಯುತ್ತಿವೆ. ಈ ಬಗ್ಗೆ ಲಸಿಕೆಯ ಉಪಯೋಗ-ಅಪಾಯಗಳ ಲೇಬಲ್ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು USFDA ಯು ಮೊಡೆರ್ನಾ ಸಂಸ್ಥೆಗೆ ತಿಳಿಸಿದೆ.
ಭಾರತದಲ್ಲಿ ವ್ಯಾಪಕವಾಗಿ ಬಳಕೆ ಆಗಿರುವ ಕೋವಿಶೀಲ್ಡ್ ಕೂಡ ಮೊಡೆರ್ನಾ ಸಂಶೋಧಿಸಿದ ಲಸಿಕೆ. ಹಾಗಾಗಿ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಬರೆದಿರುವ ಪತ್ರ ಈಗ ಭಾರತದಲ್ಲೂ ಸುದ್ದಿಯಾಗಿದೆ.
ದೇಶದ ವಿವಿಧೆಡೆ ತೀರಾ ಸಣ್ಣ ವಯಸ್ಸಿನ ಆರೋಗ್ಯವಂತ ಜನರು ದಿಢೀರ್ ಹೃದಯದ ಸಮಸ್ಯೆ ಉಲ್ಬಣವಾಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನಿಧನರಾಗುವ ಸುದ್ದಿ ಈಗ ಮಾಮೂಲಿ ಎಂಬಂತಾಗಿದೆ. ಪ್ರತಿದಿನ ಪತ್ರಿಕೆಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಯುವಜನರು, ಕೆಲವೆಡೆ ಮಕ್ಕಳೂ ಹೃದಯಾಘಾತಕ್ಕೊಳಗಾಗಿ ಜೀವ ಕಳಕೊಳ್ಳುವ ಸುದ್ದಿ ಬರುತ್ತಲೇ ಇದೆ. ಈ ಬಗ್ಗೆ ಒಂದು ಸಮಗ್ರ ತನಿಖೆ ನಡೆಯಬೇಕು ಎಂದು ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ಅವರು ನಿರಂತರ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳಿಗೆ ಪತ್ರ ಬರೆಯುತ್ತಲೇ ಇದ್ದಾರೆ.
ಇದರ ಫಲಶ್ರುತಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಈ ವಿಚಾರದಲ್ಲಿ ಅಧ್ಯಯನ ನಡೆಸುವಂತೆ ಆರೋಗ್ಯ ಇಲಾಖೆಗೆ ಆದೇಶ ನೀಡಿದ್ದಾರೆ. ಅಮೆರಿಕದಲ್ಲಿನ ಈ ಹೊಸ ಬೆಳವಣಿಗೆಯು ಕರ್ನಾಟಕದ ಅಧ್ಯಯನ ಸಮಿತಿ “ಸರ್ಕಾರದ ಉದ್ದೇಶವನ್ನು ಗಂಭೀರವಾಗಿ ಪರಿಗಣಿಸುವಂತೆ”, ಎಲ್ಲವನ್ನೂ ಮೇಲುಪದರದಲ್ಲೇ “ಏನೂ ಸಮಸ್ಯೆಯಿಲ್ಲ” ಎಂದು ಗುಡಿಸಿಹಾಕದಂತೆ ಮಾರ್ಗದರ್ಶನ ನೀಡುವಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ಆಗಲಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲವಾದರೂ ಜೀವಗಳು ಅನಗತ್ಯವಾಗಿ ಸಾವಿಗೀಡಾಗುವುದು ತಪ್ಪಲಿ ಎಂದು ಪ್ರಾರ್ಥನೆ ಎಂದು ರಾಜಾರಾಮ್ ತಲ್ಲೂರು ಅವರು ಪ್ರತಿಕ್ರಿಯಿಸಿದ್ದಾರೆ.