ಅಭಿಷೇಕ್ ಶರ್ಮಾ ಸಿಕ್ಸರ್ ಶಾಕ್: ಟಾಟಾ ಕಾರಿನ ಗಾಜು ಪುಡಿಪುಡಿ, 5 ಲಕ್ಷ ದೇಣಿಗೆ ಘೋಷಣೆ

ಬೆಂಗಳೂರು: ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಎಂದಿನಂತೆ ಶರವೇಗದ ಆರಂಭ ನೀಡಿದರು. ಅಭಿಷೇಕ್ ಯಾವಾಗಲು ಮೊದಲು ಚೆಂಡಿನಿಂದಲೇ ದಾಳಿ ಮಾಡುವುದರಲ್ಲಿ ಎತ್ತಿದ ಕೈ. ಅವರು ಕ್ರೀಸ್ಗೆ ಬಂದ ತಕ್ಷಣ ಬೌಲರ್ಗಳು ಅಲರ್ಟ್ ಆಗುತ್ತಾರೆ. ಐಪಿಎಲ್ 2025 ರಲ್ಲಿ ಇವರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಆದರೆ, ಪ್ರತಿ ಪಂದ್ಯದಲ್ಲಿ ಸ್ಫೋಟಕ ಆರಂಭ ನೀಡುತ್ತಾರೆ. ಇಂದು ಆರ್ಸಿಬಿ ವಿರುದ್ಧ ಕೂಡ ಸಿಡಿಲಬ್ಬರ ತ್ವರಿತ ಆರಂಭ ನೀಡಿದರು.
ಅಭಿಷೇಕ್ ಸಿಕ್ಸ್ಗೆ ಕಾರಿನ ಗಾಜು ಪುಡಿಪುಡಿ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಒಂದು ಸಿಕ್ಸರ್ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದಿದೆ. ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಆರ್ಸಿಬಿ ತಂಡದ ತಾತ್ಕಾಲಿಕ ನಾಯಕ ಜೀತೇಶ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ ಮಾಡಲು ಕರೆತಂದಾಗ ಈ ಘಟನೆ ಸಂಭವಿಸಿತು. ಆ ಓವರ್ನ 5ನೇ ಎಸೆತದಲ್ಲಿ ಅಭಿಷೇಕ್ ಮಿಡ್ವಿಕೆಟ್ ಕಡೆಗೆ ಬೃಹತ್ ಸಿಕ್ಸರ್ ಬಾರಿಸಿದರು. ಚೆಂಡು ನೇರವಾಗಿ ಐಪಿಎಲ್ 2025 ಲೀಗ್ನ ಪ್ರಾಯೋಜಕರಾದ ಟಾಟಾ ಅವರ ಕಾರಿನ ಮೇಲೆ ಬಿದ್ದಿತು. ಇದರಿಂದಾಗಿ ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ.
ಟಾಟಾ 5 ಲಕ್ಷ ರೂಪಾಯಿ ದೇಣಿಗೆ ನೀಡಲಿದೆ
ಐಪಿಎಲ್ 2025 ಪ್ರಾರಂಭವಾಗುವ ಮೊದಲು, ಪಂದ್ಯದ ಸಮಯದಲ್ಲಿ ಬ್ಯಾಟ್ಸ್ಮನ್ ಕಾರಿನ ಮೇಲೆ ನೇರವಾಗಿ ಶಾಟ್ ಹೊಡೆದರೆ ಹಣವನ್ನು ದೇಣಿಗೆ ನೀಡುವುದಾಗಿ ಟಾಟಾ ಘೋಷಿಸಿತ್ತು. ಒಂದು ವೇಳೆ ಚೆಂಡು ಕಾರಿಗೆ ತಗುಲಿದರೆ, ಟಾಟಾ ಸಂಸ್ಥೆಯು 5 ಲಕ್ಷ ರೂ. ಗಳನ್ನು ದೇಣಿಗೆ ನೀಡುತ್ತದೆ. ಈ ಮೊತ್ತವನ್ನು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ ಟಾಟಾ ಕಾರ್ ದೇಣಿಗೆ ನೀಡಲಿದೆ. ಅಭಿಷೇಕ್ ಶರ್ಮಾ ಅವರಿಗಿಂತ ಮೊದಲು, ಅದೇ ಮೈದಾನದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ನ ಮಿಚೆಲ್ ಮಾರ್ಷ್ ಕಾರಿನ ಮೇಲೆ ಸಿಕ್ಸರ್ ಬಾರಿಸಿದ್ದರು.
ಆರ್ಸಿಬಿಗೆ ಜಿತೇಶ್ ಶರ್ಮಾ ನಾಯಕ:
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಆರ್ಸಿಬಿ ತಂಡದ ನಾಯಕತ್ವ ವಹಿಸಿಲ್ಲ. ಅವರ ಸ್ಥಾನದಲ್ಲಿ ಜಿತೇಶ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಆದಾಗ್ಯೂ, ರಜತ್ ಪಾಟಿದಾರ್ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದಲ್ಲ. ರಜತ್ ಅವರನ್ನು ತಂಡದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸೇರಿಸಲಾಗಿದೆ. ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ, ಆರ್ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಟಾಸ್ ಸಮಯದಲ್ಲಿ, ರಜತ್ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿದ್ದಾರೆ ಎಂದು ಜಿತೇಶ್ ಶರ್ಮಾ ಹೇಳಿದರು.