ಅಸ್ಸಾಂನಲ್ಲಿ ರಾಯಲ್ ಬೆಂಗಾಲ್ ಹುಲಿಯ ಹತ್ಯೆ: ಚರ್ಮ, ಉಗುರು, ಬಾಲ ಕದ್ದೊಯ್ಯಲಾಗಿದೆ

ಅಸ್ಸಾಂ: ರಾಯಲ್ ಬೆಂಗಾಲ್ ಹುಲಿಯನ್ನು ಕೊಂದು ಅದರ ಚರ್ಮ, ಬಾಲ, ಕಿವಿ, ಉಗುರುಗಳನ್ನು ಕದ್ದೊಯ್ದಿರುವ ಘಟನೆ ಅಸ್ಸಾಂನಲ್ಲಿನಡೆದಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಬಂದ ರಾಯಲ್ ಬೆಂಗಾಲ್ ಗಂಡು ಹುಲಿ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಖುಮ್ತೈ ಪ್ರದೇಶದ ದುಮುಖಿಯಾ ಗ್ರಾಮದಲ್ಲಿ ಆಶ್ರಯ ಪಡೆದಿತ್ತು.
ಇದನ್ನು ನರಭಕ್ಷಕ ಎಂದು ಭಾವಿಸಿ ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ನೋಡಿದಾಗ ಹುಲಿಯ ಚರ್ಮ, ಬಾಲ, ಕಿವಿ, ಉಗುರುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಗೋಲಾಘಾಟ್ ಜಿಲ್ಲೆಯ ಖುಮ್ತೈ ಪ್ರದೇಶದ ದುಮುಖಿಯಾ ಗ್ರಾಮಕ್ಕೆ ದಾರಿ ತಪ್ಪಿ ಬಂದ ರಾಯಲ್ ಬೆಂಗಾಲ್ ಹುಲಿಯನ್ನು ನೋಡಿ ಗ್ರಾಮಸ್ಥರು ನರಭಕ್ಷಕ ಹುಲಿಯಾಗಿರಬಹುದು ಎಂದು ತಿಳಿದು ಹೊಡೆದು ಕೊಂದು ಹಾಕಿದ್ದಾರೆ. ವಯಸ್ಕ ಗಂಡು ಹುಲಿಯನ್ನು ಸುತ್ತುವರಿದು ಈಟಿ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದಾರೆ. ಅದರ ಚರ್ಮ ತೆಗೆಯಲಾಗಿದೆ. ಕಿವಿ ಮತ್ತು ಬಾಲವನ್ನು ಕತ್ತರಿಸಲಾಗಿದೆ. ಉಗುರುಗಳು ಮತ್ತು ಮೀಸೆಗಳನ್ನು ಕಿತ್ತುಹಾಕಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಹುಲಿಯನ್ನು ಕೊಂದಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ನೋಡಿದಾಗ ಹುಲಿಯನ್ನು ಕೊಂದು ವಿರೂಪಗೊಳಿಸಿರುವುದು ಕಂಡುಬಂದಿದೆ. ಅದರ ಕೆಲವು ದೇಹದ ಭಾಗಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ದಾರಿ ತಪ್ಪಿ ಬಂದ ವಯಸ್ಕ ಗಂಡು ಹುಲಿಯು ಖುಮ್ತೈ ಪ್ರದೇಶದ ದುಮುಖಿಯಾ ಗ್ರಾಮದಲ್ಲಿ ಆಶ್ರಯ ಪಡೆದಿತ್ತು.ಸ್ಥಳೀಯರು ಅದನ್ನು ಸುತ್ತುವರಿದು ಈಟಿ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಈ ಹುಲಿ ಕೆಲವು ಜನರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರು ಹುಲಿಯನ್ನು ನರಭಕ್ಷಕ ಎಂದು ಭಾವಿಸಿ ಅದನ್ನು ಕೊಂದರು. ಆದರೆ ನಾವು ಅದರ ಶವವನ್ನು ಪಡೆದುಕೊಂಡಾಗ ಚರ್ಮದ ಒಂದು ಭಾಗ, ಒಂದು ಕಾಲು ಮತ್ತು ಸ್ವಲ್ಪ ಮಾಂಸದಂತಹ ಕೆಲವು ದೇಹದ ಭಾಗಗಳು ಕಾಣೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಮಸ್ಥರು ಹುಲಿಯನ್ನು ವಿವಿಧ ಕಡೆಗಳಿಂದ ಸುತ್ತುವರಿದು ಅನಂತರ ಅದನ್ನು ಬೆನ್ನಟ್ಟಿ ಕೊಂದಿದ್ದಾರೆ. ಹುಲಿಯ ಮೇಲೆ ದಾಳಿ ಮಾಡಲು ಅವರು ಹರಿತವಾದ ಆಯುಧಗಳು, ಕೋಲು ಮತ್ತು ರಾಡ್ಗಳಂತಹ ಸ್ಥಳೀಯ ಆಯುಧಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ದಾಳಿಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹುಲಿಯನ್ನು ಕೊಂದು ಹಾಕಲಾಗಿತ್ತು. ಭದ್ರತಾ ಸಿಬ್ಬಂದಿಯನ್ನು ಕಂಡಾಕ್ಷಣ ಎಲ್ಲರೂ ಸ್ಥಳದಿಂದ ಓಡಿಹೋದರು.
ಈ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.