ಪುಲ್ವಾಮಾ ಹೈ-ರಿಸ್ಕ್ ಕಾರ್ಯಾಚರಣೆಯಲ್ಲಿ ಧೈರ್ಯದ ನಜೀರಾ: ಮೇಜರ್ ಆಶಿಶ್ ದಹಿಯಾ ಶೌರ್ಯ ಚಕ್ರ ಪುರಸ್ಕಾರ

ನವದೆಹಲಿ: ಜೂನ್ 2022ರಿಂದ ಇಲ್ಲಿಯವರೆಗೆ 5 ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ತಟಸ್ಥಗೊಳಿಸುವ ಮತ್ತು ಮೂರು ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ತೋರಿದ ಅಸಾಧಾರಣ ಧೈರ್ಯಕ್ಕಾಗಿ ರಾಷ್ಟ್ರೀಯ ರೈಫಲ್ಸ್ನ 50ನೇ ಬೆಟಾಲಿಯನ್ನ ಮೇಜರ್ ಆಶಿಶ್ ದಹಿಯಾ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ. ಜೂನ್ 2022ರಿಂದ ಐದು ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ತಟಸ್ಥಗೊಳಿಸುವ ಮತ್ತು ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವ ಅವರ ಪಾತ್ರವನ್ನು ಗೌರವಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಪ್ರಶಸ್ತಿಯನ್ನು ನೀಡಿದ್ದಾರೆ.

ಮೇಜರ್ ಆಶಿಶ್ ದಹಿಯಾ ಅವರ ಜೊತೆಗೆ ಒಟ್ಟು 33 ಜನರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ 7 ಮರಣೋತ್ತರ ಪ್ರಶಸ್ತಿಗಳು ಕೂಡ ಸೇರಿವೆ. ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು 33 ಶೌರ್ಯ ಪ್ರಶಸ್ತಿ, 6 ಕೀರ್ತಿ ಚಕ್ರಗಳನ್ನು ಪ್ರದಾನ ಮಾಡಿದರು.
2024ರ ಜೂನ್ 2ರಂದು ಮೇಜರ್ ದಹಿಯಾ ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೂಕ್ಷ್ಮವಾಗಿ ಯೋಜಿಸಲಾದ ಕಾರ್ಯಾಚರಣೆಯನ್ನು ಮುನ್ನಡೆಸಿದರು. ಆರಂಭಿಕ ಹುಡುಕಾಟದ ಸಮಯದಲ್ಲಿ ಭಯೋತ್ಪಾದಕರು ವಿವೇಚನೆಯಿಲ್ಲದೆ ಗುಂಡು ಹಾರಿಸುವ ಮತ್ತು ಗ್ರೆನೇಡ್ಗಳನ್ನು ಎಸೆಯುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೆ ಮೇಜರ್ ದಹಿಯಾ ಪ್ರತೀಕಾರ ತೀರಿಸಿಕೊಂಡರು. ದಾಳಿ ನಡೆಸಿದ ಉಗ್ರರ ಮೇಲೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದರು.
ಗ್ರೆನೇಡ್ ಸ್ಫೋಟದಿಂದ ಕಾರ್ಯಾಚರಣೆಯ ವೇಳೆ ತನ್ನ ಸ್ನೇಹಿತನಿಗೆ ಗಾಯಗಳಾದಾಗ ಆಶಿಶ್ ದಹಿಯಾ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆವಳುತ್ತಾ ಹೋಗಿ, ತನ್ನ ಸ್ವಂತ ಸುರಕ್ಷತೆಯನ್ನು ಕೂಡ ಲೆಕ್ಕಿಸದೆ ತನ್ನ ಗೆಳೆಯನನ್ನು ಎಳೆದುಕೊಂಡು ಹೋಗಿ ಕಾಪಾಡಿದ್ದರು.
ಮೇಜರ್ ಆಶಿಶ್ ದಹಿಯಾ ಯಾರು?:
ಲ್ಯಾನ್ಸ್ ನಾಯಕ್ ಅಶೋಕ್ ದಹಿಯಾ ಮತ್ತು ಸವಿತಾ ಅವರ ಪುತ್ರ ಮೇಜರ್ ಆಶಿಶ್ ದಹಿಯಾ ಭಾರತೀಯ ಸೇನೆಯ ಅಧಿಕಾರಿ. ಪುಲ್ವಾಮಾ ಕಾರ್ಯಾಚರಣೆಯ ಸಮಯದಲ್ಲಿ, ತನ್ನ ಗಾಯಗೊಂಡ ಸಹೋದ್ಯೋಗಿಯನ್ನು ರಕ್ಷಿಸಿದ ನಂತರ ಆಶಿಶ್ ಅಡಗಿಕೊಂಡಿದ್ದ ಭಯೋತ್ಪಾದಕನ ಕಡೆಗೆ ಮುನ್ನುಗ್ಗಿ ತೀವ್ರ ಹತ್ತಿರದಿಂದ ಗುಂಡಿನ ದಾಳಿಯನ್ನು ನಡೆಸಿದರು. ಮೇಜರ್ ದಹಿಯಾ ದಕ್ಷಿಣ ಕಾಶ್ಮೀರದಲ್ಲಿ ದೀರ್ಘಕಾಲ ಕಾಟ ಕೊಡುತ್ತಿದ್ದ A++ ವರ್ಗದ ಭಯೋತ್ಪಾದಕನನ್ನು ತಟಸ್ಥಗೊಳಿಸಿದರು. ನಂತರ ಅವರು ತನ್ನ ಗಾಯಗೊಂಡ ಗೆಳೆಯನನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುಕೂಲವಾಗುವಂತೆ ಮತ್ತೊಮ್ಮೆ ಭಯೋತ್ಪಾದಕ ಗುಂಡಿನ ದಾಳಿಗೆ ತನ್ನನ್ನು ಒಡ್ಡಿಕೊಂಡರು. ಇದರಿಂದ ಅವರ ಗೆಳೆಯನ ಪ್ರಾಣ ಉಳಿಯಿತು.
“50 ರಾಷ್ಟ್ರೀಯ ರೈಫಲ್ಸ್ನ ಎಂಜಿನಿಯರ್ಗಳ ಕಾರ್ಪ್ಸ್ನ ಮೇಜರ್ ಆಶಿಶ್ ದಹಿಯಾ ಅವರಿಗೆ ಶೌರ್ಯ ಚಕ್ರವನ್ನು ಪ್ರದಾನ ಮಾಡಲಾಯಿತು. ಪುಲ್ವಾಮಾ ಜಿಲ್ಲೆಯಲ್ಲಿ ಐದು ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚುವಲ್ಲಿ ಮತ್ತು ತಟಸ್ಥಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಭಾರತದ ರಾಷ್ಟ್ರಪತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.