ಮಾಂಗಲ್ಯದಿಂದ ಪರೀಕ್ಷೆಗೆ ನೇರ ದೌಡಾಯಿಸಿದ ನವವಧು

ಹಾಸನ: ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಂಡ ಕೂಡಲೇ ನವವಧು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿ ಪುತ್ರಿ ಕವನ ಪರೀಕ್ಷೆ ಬರೆದ ನವವಧು. ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿರುವ ಕವನ ಅಂತಿಮ ವರ್ಷದ ಕೊನೆಯ ಸಬ್ಜೆಕ್ಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ಕವನ ಮದುವೆ ನಿಶ್ಚಯವಾಗಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಮುಹೂರ್ತವಿತ್ತು. ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದ ನವವಧು ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ ಎರಡು ವಿಷಯಗಳ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ಬರೆಯಲೇಬೇಕೆಂಬ ಯುವತಿ ಆಸೆಗೆ ಆಕೆಯ ಪೋಷಕರು ಸಾಥ್ ನೀಡಿದ್ದು, ಮುಹೂರ್ತ ಮುಗಿಯುತ್ತಲೇ ಸಹೋದರಿಯನ್ನು ಅಣ್ಣ ಕಾರ್ತಿಕ್ ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷೆ ಬರೆದ ಬಳಿಕ ಯುವತಿ ಆರತಕ್ಷತೆಗೆ ಕಲ್ಯಾಣಮಂಟಪಕ್ಕೆ ವಾಪಸ್ ಆಗಿದ್ದಾರೆ.