ರಾಜಸ್ಥಾನ ರಾಯಲ್ಸ್ಗೆ ಸೇರಿಸುತ್ತೇವೆಂದು 24 ಲಕ್ಷ ರೂ. ವಂಚನೆ: ಚಿಕ್ಕೋಡಿಯ ಕ್ರಿಕೆಟಿಗ ಸೈಬರ್ ತಂತ್ರಕ್ಕೆ ಬಲಿ

ಚಿಕ್ಕೋಡಿ: ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್ ವಂಚಕರು 24 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡೂರು (19) ವಂಚನೆಗೊಳಗಾದ ಯುವಕ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದ ಯುವಕನನ್ನು, ವಂಚಕರು ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕಿಸಿದ್ದಾರೆ. ರಾಜಸ್ಥಾನ ತಂಡಕ್ಕೆ ಸೇರಿಸುತ್ತೇವೆ ಎಂದು ನಂಬಿಸಿದ್ದಾರೆ.
ತಂಡಕ್ಕೆ ಸೇರಿಸಲು, 24 ಲಕ್ಷ ರೂ. ನೀಡುವಂತೆ ಯುವಕನಿಗೆ ವಂಚಕರು ಹೇಳಿದ್ದರು. ಅದರಂತೆ ವಂಚಕರ ಭರವಸೆಯನ್ನು ನಂಬಿ ಯುವಕ ಹಣವನ್ನು ಅವರ ಖಾತೆಗೆ ವರ್ಗಾಯಿಸಿದ್ದಾನೆ. ಹಣ ನೀಡಿದರೂ ಯಾವುದೇ ತಂಡಕ್ಕೂ ಆಯ್ಕೆಯಾಗದೆ ಇದ್ದಿದ್ದರಿಂದ ಆತ ಕಂಗಾಲಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ಈ ಸಂಬಂಧ ಬೆಳಗಾವಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.