ಅಕ್ರಮ ಸಂಬಂಧದ ಶಂಕೆ: ಶೆಡ್ಗೆ ಬೆಂಕಿಹಚ್ಚಿ ಯುವಕನ ಹತ್ಯೆ ಮಾಡಿದ ಪ್ರೇಮಿಗೆ ಬಂಧನ

ಬೆಂಗಳೂರು : ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡು ವ್ಯಕ್ತಿಯೋರ್ವನ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕಡುಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಅಸ್ಸಾಂ ಮೂಲದ ಇಜುಲ್ ಹಕ್ (25) ಎಂದು ಗುರುತಿಸಲಾಗಿದೆ. ಮುನಾವರ್ ಅಲಿ (22) ಎಂಬಾತ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಅಸ್ಸಾಂನಿಂದ ಬೆಂಗಳೂರಿಗೆ ಆಗಮಿಸಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ..
ಮೃತ ಹಕ್ ಪತ್ನಿ ಹಾಗೂ 6 ತಿಂಗಳ ಮಗು ಅಸ್ಸಾಂ ನಲ್ಲೇ ಇದ್ದು ಆಗಾಗ ಹೋಗಿ ಬರುತ್ತಿದ್ದ, ಇತ್ತ ಅಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಹಕ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡು ಅಲಿ ಬುಧವಾರ ಮೃತ ವ್ಯಕ್ತಿಯನ್ನು ಭೇಟಿ ಮಾಡಿ ಮಾತಾಡಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು, ಅಷ್ಟರಲ್ಲಿ ಹಕ್ ನ ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಎಂಬುವವರು ಬಂದು ಇಬ್ಬರನ್ನೂ ಸಮಾಧಾನ ಮಾಡಿದ್ದರು. ಮೊದಲೇ ಸಿಟ್ಟಿನಲ್ಲಿ ಅಲಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ..
ಅದರಂತೆ ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಇಜುಲ್ ಹಕ್ ಹಾಗೂ ಆತನ ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಮಲಗಿದ್ದಾಗ ಆರೋಪಿ ಅಲಿಯು ಶೆಡ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ..
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಇಜುಲ್ ಹಕ್ ಹಾಗೂ ಆತನ ಸ್ನೇಹಿತರು ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದಾರೆ. ಇದನ್ನು ಕೇಳಿದ ಹಕ್ ಅವರ ಸೋದರ ಮಾವ ರಶೀದುಲ್ ಹಕ್ ಎಂಬುವವರು ಕಷ್ಟಪಟ್ಟು ಮೂವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಇದೀಗ ಗಂಭೀರ ಗಾಯಗೊಂಡಿದ್ದ ಹಕ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮತ್ತಿಬ್ಬರು ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮುನಾವರ್ ಅಲಿಯನ್ನು ಬಂಧಿಸಿದ್ದಾರೆ.