ಪಾಕ್ ದಾಳಿಗೆ ತಿರುಗೇಟು: ಆಕಾಶ್ ಕ್ಷಿಪಣಿ, ಎಲ್-70 ಗನ್ಗಳಿಂದ ಗೋಲ್ಡನ್ ಟೆಂಪಲ್ ರಕ್ಷಣೆ

ಚಂಡೀಗಢ: ಪಂಜಾಬ್ನ ಅಮೃತಸರ ಗುರಿಯಾಗಿಸಿಕೊಂಡು ಪಾಕ್ ನಡೆಸಿದ್ದ ಅಪ್ರಚೋದಿತ ದಾಳಿ ವೇಳೆ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಹಾಗೂ ಎಲ್-70 ಏರ್ ಡಿಫೆನ್ಸ್ ಗನ್ಗಳು ಗೋಲ್ಡನ್ ಟೆಂಪಲ್ನ್ನು ರಕ್ಷಿಸಿದವು ಎಂದು ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಅವರು ಹೇಳಿದ್ದಾರೆ.
ಏ.22ರಂದು ಪಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ `ಆಪರೇಷನ್ ಸಿಂಧೂರ’ದ ಮೂಲಕ ಪಾಕ್ ಮೇಲೆ ಪ್ರತೀಕಾರ ತೀರಿಸಿಕೊಂಡಿತು. ಅದಾದ ಬಳಿಕ ಪಾಕಿಸ್ತಾನ ಮೇ 08ರಂದು ಪಂಜಾಬ್ನ ಅಮೃತಸರ ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸಿತು. ಆದರೆ ಭಾರತದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಯನ್ನು ವಿಫಲಗೊಳಿಸಿ, ಸಿಖ್ ಧರ್ಮದ ಪವಿತ್ರ ತಾಣವಾದ ಸ್ವರ್ಣ ದೇವಾಲಯವನ್ನು ರಕ್ಷಣೆ ಮಾಡಿತು ಎಂದರು.
ಪಾಕಿಸ್ತಾನವು ಗೋಲ್ಡನ್ ಟೆಂಪಲ್ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳು ಹಾಗೂ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಭಾರತ ನಿರೀಕ್ಷೆ ಮಾಡಿತ್ತು. ಅದರಂತೆಯೇ ಪಾಕಿಸ್ತಾನ ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ವಾಯುದಾಳಿ ನಡೆಸಿತು ಎಂದು ಹೇಳಿದರು.
ಆದರೆ ಭಾರತ ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್-70 ಏರ್ ಡಿಫೆನ್ಸ್ ಗನ್ಗಳನ್ನು ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್ನ ನಗರಗಳನ್ನು ಪಾಕ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ರಕ್ಷಿಸಿದ್ದೇವೆ ಎಂದು ವಿವರಿಸಿದರು. ನಮ್ಮ ರಕ್ಷಣಾ ವ್ಯವಸ್ಥೆ ಯಾವುದೇ ರೀತಿಯ ದಾಳಿ ಎದುರಿಸಲು ಸಿದ್ಧವಿದೆ. ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದರು.