ಚಿಕ್ಕಬಳ್ಳಾಪುರದಲ್ಲಿ ಪೂಜಾರಿಯ ಸಂಶಯಾಸ್ಪದ ಹತ್ಯೆ: ಕೈಕಾಲು ಕಟ್ಟಿದ ಶವ ಅರಣ್ಯದಲ್ಲಿ ಪತ್ತೆ

ಚಿಕ್ಕಬಳ್ಳಾಪುರ: ಕೈ, ಕಾಲು ಕಟ್ಟಿ ಪೂಜಾರಿಯ ಕೊಲೆ ಮಾಡಿ, ಮೃತದೇಹವನ್ನು ಅರಣ್ಯದಲ್ಲಿ ಬೀಸಾಡಿರುವ ಘಟನೆ ಚಿಕ್ಕಬಳ್ಳಾಪುರತಾಲೂಕಿನ ಕೊರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕೊರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಅರಣ್ಯ ಇಲಾಖೆಯ ಗಾರ್ಡ್ ಹನುಮಂತಪ್ಪ ರೌಂಡ್ಸ್ ಹಾಕುತ್ತಿದ್ದಾಗ ಕೊಳೆತ ಶವವೊಂದು ಕಾಣಿಸಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚೀಲವೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಕತ್ತಲ್ಲಿ ರುದ್ರಾಕ್ಷಿ, ಕೈಯಲ್ಲಿ ರುದ್ರಾಕ್ಷಿ, ಹಳದಿ ಪಂಚೆ, ಶರ್ಟ್ ಧರಿಸಿದ್ದು, ನೋಡುವುದಕ್ಕೆ ದೇವಸ್ಥಾನದ ಪೂಜಾರಿಯಂತೆ ಕಾಣಿಸುತ್ತದೆ ಎನ್ನಲಾಗಿದೆ. ಜೊತೆಗೆ ಶವವನ್ನು ಮೂರು ವಾರಗಳ ಹಿಂದೆಯೇ ಬೀಸಾಡಿರುವ ಶಂಕೆ ವ್ಯಕ್ತವಾಗಿದ್ದು, ಗುರುತು ಪತ್ತೆಹಚ್ಚಲು ಹರಸಾಹಸಪಡುತ್ತಿದ್ದಾರೆ.
ಸದ್ಯ ಸ್ಥಳಕ್ಕೆ ಫಾರೆನ್ಸಿಕ್ ತಂಡ, ಕ್ರೈಮ್ ಎಕ್ಸ್ಫರ್ಟ್ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ತನಿಖೆ ಚುರುಕುಗೊಂಡಿದೆ.