ಆಪರೇಷನ್ ಸಿಂಧೂರ: ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಜಗತ್ತಿಗೆ ಪರಿಚಯ – ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಯುದ್ಧಘೋಷದ ಹಿಂದಿರುವ ಸಾಮರ್ಥ್ಯ

ಆಪರೇಷನ್ ಸಿಂಧೂರದೊಂದಿಗೆ ಜಗತ್ತಿಗೆ ಭಾರತದ ಅತ್ಯಂತ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಸಾಮರ್ಥ್ಯಗಳು ಪರಿಚಯವಾಗಿದೆ. ಅದರಲ್ಲೂ ಪಾಕಿಸ್ತಾನದ ಏರ್ಬೇಸ್ಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿ ಅತ್ಯಂತ ಕರಾರುವಕ್ ಆಗಿ ಬಿದ್ದ ಪರಿಣಾಮವನ್ನ ಜಗತ್ತೇ ನೋಡುತ್ತಿದೆ.
ಈ ಕ್ಷಿಪಣಿ ವ್ಯವಸ್ಥೆಯ ಬಗ್ಗೆ ಭಾರತೀಯರಿಗೆ ಅಷ್ಟಾಗಿ ತಿಳಿದಿಲ್ಲ. ಇಂದು ಜಗತ್ತಿನ 17 ರಾಷ್ಟ್ರಗಳು ಈ ಮಿಸೈಲ್ಗೆ ಬೇಡಿಕೆ ಇಟ್ಟಿವೆ. ಆದರೆ, ಬ್ರಹ್ಮೋಸ್ನ ಇನ್ನೊಂದು ವಿಶೇಷತೆ ಏನೆಂದರೆ, ಇದರ ವಾರ್ ಕ್ರೈ ಅಥವಾ ಯುದ್ಧಘೋಷ.
ಯಾವುದೇ ಯುದ್ಧ ಅಥವಾ ಆಪರೇಷನ್ ಆರಂಭವಾಗುವ ಮುಂಚೆ ಸೈನಿಕರು ತಮ್ಮನ್ನು ತಾವು ಹಾಗೂ ಇಡೀ ಯುನಿಟ್ಅನ್ನು ಉತ್ಸಾಹಭರಿತವನ್ನಾಗಿ ಮಾಡಲು ಹೇಳುವ ಭಾರೀ ಸ್ವರದ ಘೋಷಗಳು. ಇದನ್ನು ವಾರ್ ಕ್ರೈ ಎನ್ನಲಾಗುತ್ತದೆ.
ಭಾರತ ಹಾಗೂ ರಷ್ಯಾದ ಜಂಟಿ ಉದ್ಯಮವಾಗಿರುವ ಬ್ರಹ್ಮೋಸ್ ಮಿಸೈಲ್ಗೆ ಈ ಹೆಸರು ಬಂದಿದ್ದು ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕೋವಾ ನದಿಗಳಿಂದ. ಭಾರತದ ಡಿಆರ್ಡಿಓ ಹಾಗೂ ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ಸೇರಿ ಬ್ರಹ್ಮೋಸ್ ಏರೋಸ್ಪೇಸ್ ಎಂಬ ಕಂಪನಿಯನ್ನು ಆರಂಭಿಸಿವೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಸಬ್ಮರೀನ್, ಯುದ್ಧಹಡಗು, ಯುದ್ಧ ವಿಮಾನ ಹಾಗೂ ಟಿಇಎಲ್ (ಟ್ರಾನ್ಸ್ಪೋರ್ಟರ್ ಎರೆಕ್ಟರ್ ಲಾಂಚರ್) ಮೂಲಕ ಉಡಾವಣೆ ಮಾಡಬಹುದು. ಪ್ರಸ್ತುತ ಭಾರತದ ಆರ್ಮಿ, ನೇವಿ ಹಾಗೂ ಏರ್ಫೋರ್ಸ್ ಜೊತೆಗೆ ಫಿಲಿಪ್ಪಿನ್ಸ್ನ ನೇವಿ ಕೂಡ ಈ ಕ್ಷಿಪಣಿಯನ್ನು ಬಳಕೆ ಮಾಡುತ್ತಿದೆ.
ಭಾರತದ ವಿವಿಧ ರೆಜಿಮೆಂಟ್ಗಳಿಗೆ ವಿವಿಧ ರೀತಿಯ ವಾರ್ ಕ್ರೈಗಳಿವೆ. ಪಿಜೆ-10 ಎಂದೂ ಕರೆಯಲಾಗುವ ಬ್ರಹ್ಮೋಸ್ಗೂ ಒಂದು ವಾರ್ ಕ್ರೈ ಇದೆ. ಭಾರತದ 861 ಮಿಸೈಲ್ ರೆಜಿಮೆಂಟ್ ಬ್ರಹ್ಮೋಸ್ಅನ್ನು ಬಳಕೆ ಮಾಡುತ್ತದೆ. ಶಬರಿಮಲೆಯ ಮೂಲ ದೇವರು ಅಯ್ಯಪ್ಪ ಸ್ವಾಮಿಯ ಘೋಷಣೆಯಾದ, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಅನ್ನೋದು ಬ್ರಹ್ಮೋಸ್ನ ಯುದ್ಧಘೋಷವಾಗಿದೆ. ಇದರ ಅರ್ಥ ಅಯ್ಯಪ್ಪ ಸ್ವಾಮಿಯೇ ನಿನ್ನನ್ನೇ ನಂಬಿದ್ದೇವೆ ಎನ್ನುವುದಾಗಿದೆ.
ಬ್ರಹ್ಮೋಸ್ ಸೂಪರ್ ಫಾಸ್ಟ್ ಮಿಸೈಲ್ ಆಗಿದ್ದು, ಜಗತ್ತಿನ ಅತ್ಯಂತ ವೇಗದ ಕ್ಷಿಪಣಿಗಳಲ್ಲೊಂದು. ಮ್ಯಾಕ್-3 ಅಂದರೆ, ಶಬ್ದಕ್ಕಿಂತ ಮೂರುಪಟ್ಟು ವೇಗದಲ್ಲಿ ಇದು ಚಲಿಸುತ್ತದೆ. ಭಾರತದ ಸೇನೆಯ ನಾಲ್ಕು ರೆಜಿಮೆಂಟ್ಗಳು ಇದನ್ನ ಬಳಕೆ ಮಾಡುತ್ತಿದೆ.