ಪಾಕಿಸ್ತಾನ ಪರ ಘೋಷಣೆ, ಕಲ್ಮಾ ಕುರಿತು ವಿಡಿಯೋ: ಯಾದಗಿರಿಯ ಜಾಫರ್ ಖಾನ್ ಬಂಧನ

ಯಾದಗಿರಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಭಾರತೀಯ ಸೇನೆಯು ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕೆಲವು ಘಟನೆಗಳು ವರದಿಯಾಗಿವೆ. ಇದೀಗ, ಧರ್ಮ ಹಾಗೂ ಜನಾಂಗಗಳ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ ಮಾಡಿದ ಆರೋಪದಲ್ಲಿ ಯಾದಗಿರಿ ನಗರದ ನಿವಾಸಿ ಜಾಫರ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪ್ರಚೋದನಾಕಾರಿ ವಿಡಿಯೋ ಪೋಸ್ಟ್
ಕಲ್ಮಾ ಪಠಣಕ್ಕೆ ಸಬಂಧಿಸಿದ ಬರಹ ಇರುವುದು ಎನ್ನಲಾದ ಕರಪತ್ರಗಳನ್ನು ಕೆಲವರು ಕಾಲಿನಿಂದ ಒದೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ, ‘ಕಲ್ಮಾಗೆ ಅವಮಾನ ಮಾಡಿದರೆ ನಾನು ಜೀವ ಕೊಡುವುದಕ್ಕೂ ಸಿದ್ಧನಿದ್ದೇನೆ. ಜೀವ ತೆಗೆಯಲೂ ಸಿದ್ಧನಿದ್ದೇನೆ’ ಎಂದು ಪೋಸ್ಟ್ ಮಾಡಿದ್ದ.
‘ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಬೇರೆ ಯಾರ ಜೊತೆಗೆ ಬೇಕಾದರೂ ಪ್ರತೀಕಾರ ತೆಗೆದುಕೊಳ್ಳಿ. ಆದರೆ ಕಲ್ಮಾ ಜೊತೆ ಅಲ್ಲ. ಕಲ್ಮಾಗೆ ಅವಮಾನ ಮಾಡಿದರೆ ಜೀವ ತೆಗೆಯಲು ಸಿದ್ಧನಿದ್ದೇನೆ’ ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದ.
ಆರೋಪಿ ಜಾಫರ್ ಖಾನ್ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 192, 353(2) ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಛತ್ತೀಸ್ಗಢ ಮೂಲದ ಶುಭಾಂಶು ಶುಕ್ಲಾ ಎಂಬ ಟೆಕ್ಕಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಜಾಫರ್ ಖಾನ್ನ ಬಂಧನವಾಗಿದೆ.
ಪ್ರಚೋದನಾಕಾರಿ ಪೋಸ್ಟ್: ಕರ್ನಾಟಕದಲ್ಲಿ ಇತ್ತೀಚಿನ ಪ್ರಕರಣಗಳು
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ದಿಕ್ಕಾರ ಆಪರೇಷನ್ ಸಿಂದೂರ್” ಎಂಬ ಪೋಸ್ಟ್ ಹಾಕಿದ್ದಳು.
- ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ಓರ್ವ ವಿದ್ಯಾರ್ಥಿನಿ “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”, “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಬರೆದಿದ್ದಳು.
- ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂಬ ವಿಡಿಯೋ ವೈರಲ್ ಮಾಡಿದ್ದ ಯುವಕನನ್ನು ಬೆಂಗಳೂರಿನಲ್ಲಿ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದರು.
- ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಛತ್ತೀಸ್ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾನನ್ನು ಬಂಧಿಸಲಾಗಿದೆ
