ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಸಾಮಾಜಿಕ ಜಾಲತಾಣದಲ್ಲಿ ಸೇಡು ಪೋಸ್ಟ್

ಮೈಸೂರು: ಇತ್ತೀಚೆಗೆ ಮೈಸೂರು ತಾಲ್ಲೂಕು ವರುಣ ಗ್ರಾಮದ ಹೊರವಲಯದಲ್ಲಿ ಕ್ಯಾತಮಾರನಹಳ್ಳಿ ರೌಡಿಶೀಟರ್ ಕಾರ್ತಿಕ್ ಬರ್ಬರವಾಗಿ ಕೊಲೆ ಆಗಿದೆ. ಸಾಕಷ್ಟು ಹವಾ ಮಾಡಿದ್ದ ಕಾರ್ತಿಕ್ ತನ್ನದೇ ಸ್ನೇಹಿತರಿಂದ ಬರ್ಬರವಾಗಿ ಕೊಲೆಯಾಗಿದ್ದ. ಘಟನೆ ನಡೆದು 10 ಗಂಟೆಗಳಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಆದರೆ ಇದೀಗ ಮೈಸೂರಿನಲ್ಲಿ ಮತ್ತೆ ನೆತ್ತರು ಹರಿಯುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಾರ್ತಿಕ್ ಕೊಲೆಗೆ ರಿವೇಂಜ್ ತೆಗೆದುಕೊಳ್ಳುತೇವೆ ಅಂತ ಪೋಸ್ಟ್ ವೈರಲ್ ಆಗಿದೆ.
ಜಗದೀಶ್ ಎಂಬ ಸೋಶಿಯಲ್ ಮೀಡಿಯಾ ಹೆಸರಿನ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿದ್ದು, ‘ಕಾರ್ತಿಕ್ ಕೊಲೆ ಆರೋಪಿಗಳನ್ನು ಹೊಡೆದೇ ಹೊಡೆಯುತ್ತೇವೆ. ನಿಮಗೂ ಬಂತು ಕೇಡುಗಾಲ’ ಎಂದು ಪೋಸ್ಟ್ ವೈರಲ್ ಮಾಡಲಾಗಿದೆ. ಆ ಮೂಲಕ ಬೆಂಬಲಿಗರು ಕಾರ್ತಿಕ್ ಕೊಲೆ ಸೇಡು ತೀರಿಸಿಕೊಳ್ಳುತ್ತಾರಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ.
ಸದ್ಯ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಪೋಸ್ಟ್ ಹಾಕಿದ ಜಗದೀಶ್ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಣ್ಣಿನಿಂದ ಮಟಾಷ್ ಆದ ರೌಡಿಶೀಟರ್ ಕಾರ್ತಿಕ್
ಮೈಸೂರಿನಲ್ಲಿ ಕೆ ಬಾಸ್ ಅಂತಲೇ ಫೇಮಸ್ ಆಗಿದ್ದ ನಟೋರಿಯಸ್ ರೌಡಿಶೀಟರ್ ಕಾರ್ತಿಕ್ ಹೆಣ್ಣಿನಿಂದ ಮಟಾಷ್ ಆಗಿದ್ದ ಸತ್ಯ ರಿವೀಲ್ ಆಗಿದೆ. ಆರೋಪಿಗಳಾದ ಪ್ರವೀಣ್, ಆನಂದ್ ಗೌಡ, ಅವಿನಾಶ್, ಚಂದು ರವಿ, ಶೆಟ್ಟಿ ಹಾಗೂ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಕೊಲೆಗೆ ಮಹಿಳೆ ಕೂಡ ಕಾರಣ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.
ಕಾರ್ತಿಕ್ ಕೊಲೆಯ ಪ್ರಮುಖ ರೂವಾರಿ ಪ್ರವೀಣ್. ಈ ಪ್ರವೀಣ್ ಹಿಂದೆ ಕಾರ್ತಿಕ್ ಬಳಿ ಡ್ರೈವರ್ ಆಗಿದ್ದ. ಕಾರ್ತಿಕ್ಗೆ ತುಂಬಾ ಆತ್ಮೀಯನಾಗಿದ್ದ. ಇನ್ನು ಕಾರ್ತಿಕ್ ಮಹಿಳೆಯೊಬ್ಬಳ ಜೊತೆ ಆತ್ಮೀಯವಾಗಿದ್ದ. ಕೆಲ ದಿನಗಳ ನಂತರ ಪ್ರವೀಣ್ ಸಹಾ ಅದೇ ಮಹಿಳೆ ಜೊತೆ ಸಂಪರ್ಕ ಸಾಧಿಸಿದ್ದ. ಈ ವಿಚಾರವಾಗಿ ಪ್ರವೀಣ್ ಹಾಗೂ ಕಾರ್ತಿಕ್ ನಡುವೆ ಗಲಾಟೆಯಾಗಿತ್ತು. ಪ್ರವೀಣ್ ಕೊಲೆ ಮಾಡುವುದಾಗಿ ಕಾರ್ತಿಕ್ ನೇರವಾಗಿ ಧಮ್ಕಿ ಹಾಕಿದ್ದ. ತನ್ನನ್ನು ಎಲ್ಲಿ ಕಾರ್ತಿಕ್ ಕೊಲೆ ಮಾಡುತ್ತಾನೋ ಅನ್ನೋ ಭಯದಿಂದ ಪ್ರವೀಣ್, ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕ್ ಕೊಲೆ ಮಾಡಿದ್ದ.