ಸೀಳು ತುಟಿ ಹೊಂದಿದೆ ಎಂಬ ಕಾರಣಕ್ಕೆ ಮಗು ತ್ಯಜಿಸಿದ ಜೋಡಿ ಪತ್ತೆ – ಪೊಲೀಸ್ ತನಿಖೆ ಫಲಕಾರಿಯಾಗಿದ್ದು, ಮಗು ಸುರಕ್ಷಿತ

ಬೆಂಗಳೂರು: ಹೆಣ್ಣುಮಗುವಿಗೆ ಸೀಳುತುಟಿ ಇದೆಯೆಂಬ ಕಾರಣಕ್ಕೆ ಆಟೊದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಏಪ್ರಿಲ್ 24ರಂದು ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಆಟೊದಲ್ಲಿ ಬಿಟ್ಟು ಆರೋಪಿ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆ ಪರಾರಿಯಾಗಿದ್ದರು.
‘ಕೊಡಗಿನ ವಿರಾಜಪೇಟೆಯ ಅಪ್ಪಣ್ಣ ಎಂಬಾತ ಮಹಿಳೆಯ ಜತೆ ಸಲುಗೆ ಹೊಂದಿದ್ದ. ಮಹಿಳೆಗೆ ಈಗಾಗಲೇ ಒಂದು ಮಗುವಿದ್ದು, ಪತಿಯ ಸಾವಿನ ನಂತರ ಅಪ್ಪಣ್ಣನೊಂದಿಗೆ ಸಂಬಂಧ ಹೊಂದಿದ್ದಳು. ಈ ಇಬ್ಬರ ಸಂಬಂಧಕ್ಕೆ ಜನಿಸಿದ್ದ ಹೆಣ್ಣುಮಗು ಸೀಳು ತುಟಿ ಹೊಂದಿತ್ತು. ಹಾಗಾಗಿ ಈ ಮಗುವನ್ನು ಸಾಕಲು ಇಚ್ಛಿಸದ ಜೋಡಿ, ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಿಲುಗಡೆ ಮಾಡಿದ್ದ ಆಟೊವೊಂದರಲ್ಲಿ ಮಲಗಿಸಿ ಕೆಎಸ್ಆರ್ಟಿಸಿ ಬಸ್ ಮೂಲಕ ವಿರಾಜಪೇಟೆಗೆ ಹೋಗಿತ್ತು. ಬೆಳಿಗ್ಗೆ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ನಂತರ ವಿರಾಜಪೇಟೆಯಲ್ಲಿದ್ದ ಅಪ್ಪಣ್ಣನನ್ನು ಬಂಧಿಸಲಾಗಿದೆ. ಇಪ್ಪತ್ತು ದಿನದ ಮಗುವನ್ನು ಮಹಿಳೆಗೆ ಹಸ್ತಾಂತರಿಸಿ, ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.