ಮನೆಯ ಮೇಲೆ ಕೈಬರಹ, ಬೀಗ: ನಂಜನಗೂಡಿನಲ್ಲಿ ಖಾಸಗಿ ಫೈನಾನ್ಸಿಗಳ ಕಿರುಕುಳ ಮತ್ತೊಮ್ಮೆ ಬೆಳಕಿಗೆ

ನಂಜನಗೂಡು: ನಂಜನಗೂಡು ತಾಲ್ಲೂಕಿನಲ್ಲಿ ಮತ್ತೆ ಖಾಸಗಿ ಫೈನಾನ್ಸಿಗಳ ಕಿರುಕುಳ ಹೆಚ್ಚಾಗಿದ್ದು, ವಾಸದ ಮನೆಗೆ ಬೀಗ ಜಡಿದು ಮನೆಯ ಮಾಲೀಕರನ್ನು ಹೊರದಬ್ಬಿರುವ ಘಟನೆ ನಂಜನಗೂಡು ತಾಲ್ಲೂಕಿನ ಸೂರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಿಗಮ್ಮ ಎಂಬುವವರು ಡಿ.30, 2023 ರಲ್ಲಿ ಮೈಸೂರು ಮೂಲದ ಜನ ಸ್ಮಾಲ್ ಎಂಬ ಖಾಸಗಿ ಫೈನಾನ್ಸಿಗೆ ವಾಸದ ಮನೆಯ ಪತ್ರಗಳನ್ನು ನೀಡಿ 5 ಲಕ್ಷ ರೂ.ಗಳನ್ನು ಸಾಲ ಪಡೆದುಕೊಂಡಿದ್ದರು.
ಸಾಲ ಮತ್ತು ಬಡ್ಡಿಯನ್ನು ಒಂದು ವರ್ಷಗಳ ಕಾಲ ಕಟ್ಟಿಕೊಂಡು ಬಂದಿದ್ದಾರೆ. ಮತ್ತೆ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಜನ ಸ್ಮಾಲ್ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ವಾಸದ ಮನೆಗೆ ಬೇಗ ಜಡಿದು ಮನೆಯ ಗೋಡೆಯ ಮೇಲೆ ಕೈಬರಹ ಬರೆದಿದ್ದಾರೆ. ಇದರಿಂದ ಮನನೊಂದ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಏಕೀಕರಣದ ಹಾದಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮತ್ತು ರೈತರು ತೆರಳಿ ನೊಂದಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಖಾಸಗಿ ಫೈನಾನ್ಸ್ ಗಳ ಕಿರುಕುಳಕ್ಕೆ ಸರ್ಕಾರ ಬ್ರೇಕ್ ಹಾಕಿದರು ಸಿಬ್ಬಂದಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ವಾಸವಿರುವ ಮನೆಗೆ ಬೀಗ ಹಾಕಿರುವುದು ಸರಿ ಇಲ್ಲ.
ಖಾಸಗಿ ಫೈನಾನ್ಸ್ ಗಳು ಕಿರುಕುಳ ನೀಡದೆ ಹಂತ ಹಂತವಾಗಿ ಸಾಲವನ್ನು ಮರುಪಾವತಿ ಮಾಡಿಕೊಳ್ಳಬೇಕು. ಈ ರೀತಿ ಮನೆಗೆ ಬೀಗ ಹಾಕಿ ಕುಟುಂಬಸ್ಥರನ್ನು ಹೊರದಬ್ಬುವುದು ಸರಿ ಇಲ್ಲ. ಕೂಡಲೇ ಜನ ಸ್ಮಾಲ್ ಖಾಸಗಿ ಫೈನಾನ್ಸ್ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕುಟುಂಬಸ್ಥರೊಂದಿಗೆ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಸಬಾ ಹೋಬಳಿ ಅಧ್ಯಕ್ಷ ಮಹದೇವಸ್ವಾಮಿ, ಸಿಂಧುವಳ್ಳಿ ಮಹದೇವ ನಾಯಕ, ಸೋಮಣ್ಣ, ಸೀನ, ರಮೇಶ್ ಸೇರಿದಂತೆ ಹಲವು ರೈತರು ಹಾಜರಿದ್ದರು.