ಅರಣ್ಯದಲ್ಲಿ ಪ್ರತಿಭಟನೆಯಾದಮೇಲೆ ನೋಟಿಸ್: 52 ಆದಿವಾಸಿ ಕುಟುಂಬಗಳಿಗೆ ನಿರ್ಗಮನ ಸೂಚನೆ

ಮಡಿಕೇರಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಮೇ 5ರಿಂದ ಪ್ರತಿಭಟಿಸುತ್ತಿದ್ದ ಜೇನು ಕುರುಬ ಸಮುದಾಯಕ್ಕೆ ಸೇರಿದ 52 ಕುಟುಂಬಗಳಿಗೆ ಅರಣ್ಯದಿಂದ ಹೊರ ಹೋಗುವಂತೆ ಅರಣ್ಯ ಇಲಾಖೆ ಗುರುವಾರ ನೋಟಿಸ್ ನೀಡಿದೆ.
‘ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರ್ವೇ ಕಾರ್ಯ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಜುಲೈ 23ರವರೆಗೂ ಕೈಗೊಳ್ಳದಂತೆ ಮೇ 6ರಂದು ತಡೆಯಾಜ್ಞೆ ಸೂಚಿಸಿದ್ದಾರೆ
ಹಾಗಾಗಿ, ಕೂಡಲೇ ಅರಣ್ಯದಿಂದ ಹೊರಬರಬೇಕು’ ಎಂದು ನಾಗರಹೊಳೆ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನನ್ಯಕುಮಾರ್ ಸೂಚಿಸಿದ್ದಾರೆ.
ಈ ಮಧ್ಯೆ, ಪ್ರತಿಭಟನೆ ಬೆಂಬಲಿಸಲು ಅರಣ್ಯ ಪ್ರವೇಶಕ್ಕೆ ಮುಂದಾದವರನ್ನು ಪೊಲೀಸರು ಚೆಕ್ಪೋಸ್ಟ್ ನಿರ್ಮಿಸಿ ತಡೆದಿದ್ದಾರೆ. ಕೆಲವರ ವಿರುದ್ಧ ಪ್ರಕರಣ ದಾಖಲಿಸಿದೆ. ಬುಧವಾರ ರಾತ್ರಿ ಅರಣ್ಯದೊಳಗೆ ಪ್ಲಾಸ್ಟಿಕ್ ಜೋಪಡಿ ನಿರ್ಮಿಸುವ ಪ್ರಯತ್ನವನ್ನೂ ತಡೆದಿದೆ.
ವರದಿಗೆ ಸೂಚನೆ: ‘ಪ್ರಕರಣದಲ್ಲಿ ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ನ್ಯಾಯಾಲಯದ ತೀರ್ಪುಗಳ ಅನುಷ್ಠಾನ ಕುರಿತು ಸಮಗ್ರ ಮತ್ತು ವಾಸ್ತವ ವರದಿಯನ್ನು 2 ದಿನಗಳೊಳಗೆ ಸಲ್ಲಿಸಬೇಕು’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
‘ಮುಟ್ಟಾದ ಮಹಿಳೆಯರಿಗಾಗಿ ಹಾಕಿದ್ದ ಪ್ಲಾಸ್ಟಿಕ್ ಹೊದಿಕೆಯ ಪರದೆಯನ್ನೂ ಅರಣ್ಯ ಸಿಬ್ಬಂದಿ ರಾತ್ರಿ ಕಿತ್ತೆಸೆದಿದ್ದಾರೆ. ಹೋರಾಟವನ್ನು ಬೆಂಬಲಿಸಲು ಬರುತ್ತಿದ್ದವರನ್ನೂ ವಾಪಸ್ ಕಳುಹಿಸುತ್ತಿದ್ದಾರೆ. ನಮ್ಮ ಹೋರಾಟ ಮುಂದುರಿಸುತ್ತೇವೆ’ ಎಂದು ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹಿನ್ನೆಲೆ: ತಮ್ಮನ್ನು ಈ ಹಿಂದಿನ ದಶಕಗಳಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸಿದ್ದು, ತಮಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯಕ್ತಿಕ ಹಾಗೂ ಸಮುದಾಯ ಹಕ್ಕು ಕೊಡಬೇಕು ಎಂದು ಒತ್ತಾಯಿಸಿ ಜೇನು ಕುರುಬ ಸಮುದಾಯಕ್ಕೆ ಸೇರಿದ್ದ 52 ಆದಿವಾಸಿ ಕುಟುಂಬಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಕರಡಕಲ್ಲು ಅತ್ತೂರುಕೊಲ್ಲಿಗೆ ಮೇ 5ರಂದು ಬಂದು ಪ್ರತಿಭಟನೆ ಆರಂಭಿಸಿದ್ದರು. ನಟ ಚೇತನ್ ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ್ದರು.