ಬೆಂಗಳೂರಿನಲ್ಲಿ ಮೊಳಗಲಿದೆ ಸೈರನ್! ತಾತ್ಕಾಲಿಕ ದಿಗ್ಬಂಧನ ಈ ಅಣಕು ಕಾರ್ಯಾಚರಣೆ

ಬೆಂಗಳೂರು: ಬೆಂಗಳೂರಿನಲ್ಲಿ ಮೇ 7ರಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ‘ಆಪರೇಷನ್ ಅಭ್ಯಾಸ್’ ಹೆಸರಿನ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆಯಲಿದೆ. ನಗರದ 32 ಕಡೆಗಳಲ್ಲಿ ಸೈರನ್ ಮೊಳಗಲಿದೆ.
ಯುದ್ಧದಂತಹ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಯಾವ ಪರಿಕರಗಳನ್ನು ಬಳಸಬೇಕು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ವೈದ್ಯಕೀಯ ನೆರವು ಇತ್ಯಾದಿಗಳಿಗೆ ಸಜ್ಜುಗೊಳಿಸುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
ಸಂಜೆ ಅಣಕು ಕಾರ್ಯಾಚರಣೆ ಆರಂಭವಾಗಲಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯು ಸಿದ್ಧತೆ ಮಾಡಿಕೊಂಡಿವೆ. ಮೂರು ವಿಧದ ಸೈರನ್ಗಳು ಕೇಳಿಸಲಿವೆ. ಇದು ಸುಮಾರು 3 ಕಿ.ಮೀ. ವ್ಯಾಪ್ತಿಯವರೆಗೂ ಕೇಳಿಸಲಿದೆ. ಮೊದಲ ಸೈರನ್ ದಾಳಿ ನಡೆಯುವ ಸ್ಥಳದ ಜನರಿಗೆ ಎಚ್ಚರಿಕೆಯ ಸಂದೇಶ, ಎರಡನೇ ಸೈರನ್ ದಾಳಿ ಸಂದರ್ಭ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಮೂರನೇ ಸೈರನ್ ಮೊಳಗಲಿದೆ.
ಬೆಂಗಳೂರಿನಲ್ಲಿ ಇಂದು ( ಮೇ 7ರಂದು ) ಸಂಜೆ 4 ಗಂಟೆಗೆ ಮೊದಲ ಸೈರನ್ ಮತ್ತು 5.30 ರಿಂದ 7 ಗಂಟೆಯವರೆಗೆ ಅಣಕು ಕಾರ್ಯಾಚರಣೆ ನಡೆಯಲಿದೆ. 6.40ಕ್ಕೆ ನಗರದಾದ್ಯಂತ ವಿದ್ಯುತ್ ದೀಪಗಳು ಸ್ಥಗಿತಗೊಳ್ಳಲಿವೆ. ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಈ ಸಂದರ್ಭದಲ್ಲಿ ತರಬೇತಿ ನೀಡಲಾಗುತ್ತದೆ.
ಮಾಕ್ ಡ್ರಿಲ್ನಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೌರ ರಕ್ಷಣೆಯ ವಾರ್ಡನ್ಗಳು, ಗೃಹರಕ್ಷಕ ದಳ, ಸಿಆರ್ಪಿಎಫ್, ಸಿವಿಲ್ ಪೊಲೀಸ್ ಸಿಬ್ಬಂದಿ, ಎನ್ಸಿಸಿ, ನೆಹರೂ ಯುವ ಕೇಂದ್ರ ಸಂಘಟನೆ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಸಿಕ್ಯೂಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೇರಿ, ಕೆನರಾ ಬ್ಯಾಂಕ್, ಪೀಣ್ಯ, ವಿವಿ ಟವರ್, ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಪೊಲೀಸ್ ಠಾಣೆ, ಹಲಸೂರು ಗೃಹರಕ್ಷಕ ದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ಐಟಿಪಿಎಲ್ ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಮತ್ತು ಡೇರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ನಮ್ಮಲ್ಲಿನ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಲಿವೆ. ಜತೆಗೆ, ರಾತ್ರಿ ವೇಳೆ ವಾಹನ ಸಂಚಾರ ಸ್ಥಗಿತವಾಗಲಿದೆ.