SSLC ಫಲಿತಾಂಶದಲ್ಲಿ ನಿರಾಶೆ : ಶಾಲೆಗೆ ಬೀಗ ಹಾಕಿದ ಗ್ರಾಮಸ್ಥರು

ಸಿರಿಗೆರೆ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬಂದಿರುವ ಇಲ್ಲಿನ ಖಾಸಗಿ ಪ್ರೌಢಶಾಲೆಯೊಂದರ ವಿರುದ್ಧ ಧ್ವನಿ ಎತ್ತಿರುವ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಬರುವ ವಿಜಾಪುರ ಗ್ರಾಮದ ಶಬರ ಶಂಕರ ಪ್ರೌಢಶಾಲೆಯ ಫಲಿತಾಂಶ ಈ ಬಾರಿ ನಿರಾಶಾದಾಯಕವಾಗಿದೆ.
ಬಹು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮಕ್ಕಳ ಅಂಕ ಗಳಿಕೆ ಪ್ರಮಾಣವೂ ಕಡಿಮೆ ಇದೆ. ಆರೂ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಇದಕ್ಕೆ ಶಾಲೆಯ ಆಡಳಿತ ಮಂಡಳಿ ಕಾರಣವಾಗಿದ್ದು, ಅವರು ಸ್ಥಳಕ್ಕೆ ಬರುವ ತನಕ ತರಗತಿ ಕೊಠಡಿಗೆ ಬೀಗ ಹಾಕುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ 115 ವಿದ್ಯಾರ್ಥಿಗಳ ಪೈಕಿ 90 ಮಂದಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 50ಕ್ಕೂ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದಾರೆ. 50 ವರ್ಷಗಳ ಹಿಂದೆ ಆರಂಭವಾದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಳಪೆ ಫಲಿತಾಂಶ ಬಂದಿದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
‘ಘಟನೆ ಬಗ್ಗೆ ಆಡಳಿತ ಮಂಡಳಿಗೆ ವಿವರಿಸಲಾಗಿದೆ. ಆಡಳಿತ ಮಂಡಳಿ, ಪೋಷಕರು ಮತ್ತು ಗ್ರಾಮಸ್ಥರ ಸಭೆ ಕರೆಯಲಾಗುವುದು. ಮೊದಲ ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುವ ಮಕ್ಕಳಿಗೆ 2 ಮತ್ತು 3ನೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇದೆ. ಅದಕ್ಕಾಗಿ ಶಾಲೆಯಲ್ಲಿ ವಿಶೇಷ ತರಗತಿ ಆರಂಭಿಸಿದ್ದೇವೆ’ ಎಂದು ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ತಿಳಿಸಿದರು.