ಬೃಹತ್ ಕಟ್ಟಡಗಳು, ಸಂಕುಚಿತ ಬದುಕು: ಬೆಳೆದಂತೆ ಬೆಳದಿಲ್ಲ ಬೆಂಗಳೂರು!

ಬೆಂಗಳೂರು : ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ಗೆ ಬಂಪರ್ ಬೆಲೆ ಬಂದರೂ ಈ ನಿರ್ದಿಷ್ಟ ಪ್ರದೇಶದಲ್ಲಿ ಸಂಕಷ್ಟ ಎದುರಾಗಿದೆ ಅಂತ ಬೆಂಗಳೂರಿಗರೊಬ್ಬರು ಮಾಡಿರುವ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರು ಬೆಳೆದಂತೆ ಬೆಂಗಳೂರಿನಲ್ಲಿ ಸಮಸ್ಯೆಯೂ ಹೆಚ್ಚಳವಾಗಿದೆ.
ಆದರೆ, ಭೂಮಿ ಬೆಲೆ ಹೆಚ್ಚಳವಾಗಿಯೇ ನಾವು ಸಂಕಷ್ಟಕ್ಕೆ ಸಿಲುಕಿಕೊಂಡೆವು ಅಂತ ಯಾರಾದರೂ ಹೇಳಿರುವುದು ಬಹುಶಃ ಇದೇ ಮೊದಲಿರಬೇಕು. ಹೌದು ಬೆಂಗಳೂರಿನ ರಿಯಲ್ ಎಸ್ಟೇಟ್ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಬೆಂಗಳೂರಿನ ಹಲವು ನಿವಾಸಿಗಳು ರಿಯಾಕ್ಟ್ ಮಾಡುತ್ತಿದ್ದಾರೆ.
ಬೆಂಗಳೂರು ಬೆಳೆದಂತೆಲ್ಲವೂ ಬೆಂಗಳೂರಿನಲ್ಲಿ ಸಮಸ್ಯೆಗಳು ಸಹ ಹೆಚ್ಚಳವಾಗುತ್ತಿದೆ ಎನ್ನುವ ಮಾತಿದೆ. ಅದರಂತೆ ಬೆಂಗಳೂರು ಬೆಳೆದಂತೆಲ್ಲೂ ರಿಯಲ್ ಎಸ್ಟೇಟ್ ಉದ್ಯಮವೂ ಭಾರೀ ಬೆಳೆದಿದೆ. ಕಳೆದ 20 ರಿಂದ 30 ವರ್ಷಗಳ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ರಿಯಲ್ ಎಸ್ಟೇಟ್ ಭೂಮಿ ಬೆಲೆ ಹೆಚ್ಚಳವು ಹೊಸ ಮೆರಗು ನೀಡಿದರೂ, ಹಳೇ ಬೆಂಗಳೂರಿನ ಸೌಂದರ್ಯ ಹಾಳಾಗಿದೆ ಎಂದು ಬೆಂಗಳೂರಿನ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಸಿಂಹ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು. ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದಾನೊಂದು ಕಾಲದಲ್ಲಿ ಶಾಂತಿಯುತ ವಸತಿ ಪ್ರದೇಶವಾಗಿದ್ದ ಜಯನಗರ ಇಂದು ಜನನಿಬಿಡ, ಗದ್ದಲದ ಮತ್ತು ಧೂಳಿನ ಕೂಡಿರುವ ವಾಣಿಜ್ಯ ಕೇಂದ್ರವಾಗಿ ಬದಲಾಗಿದೆ. ನಮ್ಮ ಪೂರ್ವಜರು ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಎಲ್ಲವನ್ನೂ ಮಾಡಿದ್ದರು. ಆದರೆ ನಂತರದ ತಲೆಮಾರಿನಲ್ಲಿ ನಾವು ಹಣದ ಹಿಂದೆ ಹೋಗಿ ಅದನ್ನು ರಿಯಲ್ ಎಸ್ಟೇಟ್ಗೆ ಮಾರಿದೆವು. ಕೆಲವರಿಗೆ ಈ ಭಾಗದಲ್ಲಿ ಭೂಮಿ ಮಾರಾಟ ಮಾಡುವುದಕ್ಕೆ ಇಷ್ಟವಿಲ್ಲದೆ ಇದ್ದರೂ, ಅವರಿಗೆ ಮನೆ ಮಾರಾಟ ಮಾಡುವಂತೆ ಒತ್ತಾಯಿಸಲಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಟ್ವೀಟ್ಗೆ ಬೆಂಗಳೂರಿನ ಹಲವರು ರಿಯಾಕ್ಟ್ ಮಾಡಿದ್ದು. ಹೌದು ನೀವು ಹೇಳುತ್ತಿರುವುದು ನಿಜ ಬೆಂಗಳೂರಿನ ಸೌಂದರ್ಯ ಹಾಳಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸತ್ಯನಾರಾಯಣ ರಾವ್ ಎನ್ನುವವರು ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಜಯನಗರ ಹಾಗೂ ಬೆಂಗಳೂರು ಸಾಮಾನ್ಯವಾಗಿ ಒಂದು ಕಾಲದಲ್ಲಿ ಶಾಂತ, ಹಸಿರುಮಯವಾಗಿತ್ತು. ಮಾತ್ರವಲ್ಲ ವಾಸಯೋಗ್ಯ ಪ್ರದೇಶವಾಗಿತ್ತು. ಇಲ್ಲೇ ಬೆಳೆದ ನಮಗೆ ಈಗ ಈ ಪ್ರದೇಶ ಏನಾಗಿದೆ ಅಂತ ನೋಡುವುದಕ್ಕೆ ನೋವಾಗುತ್ತದೆ. ಆದರೆ ಸ್ಥಳೀಯ ರಿಯಲ್ ಎಸ್ಟೇಟ್ ದುರಾಸೆ ಮಾತ್ರ ಇದಕ್ಕೆ ಕಾರಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು ಈ ರೀತಿ ಬದಲಾಗುವುದಕ್ಕೆ ವಿದೇಶಿ ಕಂಪನಿಗಳು ಪ್ರಮುಖ ಪಾತ್ರ ವಹಿಸಿವೆ. ಅವರೆಲ್ಲರೂ ಕೆಲವು ಆಯ್ದ ಪ್ರದೇಶಗಳನ್ನು ಏಕೆ ಆರಿಸಿಕೊಂಡರು ಎಂದು ಎಂದಾದರೂ ಯೋಚಿಸಿದ್ದೀರಾ? ಪ್ರತಿಭೆ ಇರುವವರುವ ಇಲ್ಲಿ ಹೆಚ್ಚಾಗಿ ಇರುವುದರಿಂದ ಅವರು ಇಲ್ಲಿಗೆ ಬಂದರು ಎಂದು ಆಗಾಗ್ಗೆ ಹೇಳಲಾಗುತ್ತದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರತಿಭೆ ಅವಕಾಶವನ್ನು ಅನುಸರಿಸುತ್ತದೆ.
ಉದಾಹರಣೆಗೆ, ಹೈದರಾಬಾದ್, ಈಗ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ – ಪ್ರತಿಭೆ ಈಗಾಗಲೇ ಅಲ್ಲಿ ಇದ್ದ ಕಾರಣವಲ್ಲ, ಆದರೆ ಕಂಪನಿಗಳು ಅವರ ಕಚೇರಿಗಳನ್ನು ಪ್ರಾರಂಭಿಸಿದ್ದವು. ಜನರು ಅಲ್ಲಿಗೆ ಕೆಲಸಕ್ಕೆ ಬಂದರು. ಭಾರತದ ಇತರ ಭಾಗಗಳಲ್ಲಿಯೂ ವಿದೇಶಿ ಕಂಪನಿಗಳು ತಮ್ಮ ಕೇಂದ್ರ ಕಚೇರಿಯನ್ನು ಪ್ರಾರಂಭಿಸಬಹುದಿತ್ತು. ಉತ್ತರಾಖಂಡ ಅಥವಾ ಮಧ್ಯ ಭಾರತದಲ್ಲಿ ಹವಾಮಾನ ಸ್ನೇಹಿ ನಗರಗಳಿವೆ. ಆದರೆ ಅವುಗಳನ್ನು ನಿರ್ಲಕ್ಷಿಸಲಾಗಿದೆ.
ಕೆಲವು ನಗರಗಳಲ್ಲಿ – ವಿಶೇಷವಾಗಿ ಬೆಂಗಳೂರಿನಲ್ಲಿ – ಎಲ್ಲವನ್ನೂ ಪ್ರಾರಂಭಿಸುವುದಕ್ಕೆ ಸೂಕ್ತ ಜಾಗಗಳಲ್ಲಿ ಒಂದು ಎಂದು ಎಲ್ಲರೂ ಅಂದುಕೊಂಡಂತೆ ಇದೆ. ಇನ್ನು ಗ್ರಾಮ ಆಧಾರಿತ ಮೂಲಸೌಕರ್ಯವನ್ನು ಹೊಂದಿದ್ದ ನಮ್ಮ ಬೆಂಗಳೂರನ್ನು ಈ ಮಟ್ಟದ ನಗರ ಹೊರೆಗಾಗಿ ಎಂದಿಗೂ ವಿನ್ಯಾಸಗೊಳಿಸಲಾಗಿಲ್ಲ. ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಒಂದು ಕಾಲದಲ್ಲಿ ಹೊರವಲಯಗಳಾಗಿದ್ದವು. ಈಗ ಅಲ್ಲಿ ಬೃಹತ್ ಗಾಜಿನ ಕಟ್ಟಡಗಳು ಬಂದಿವೆ. ಟ್ರಾಫಿಕ್ ಜಾಮ್ ಹಾಗೂ ವಾಯು ಮಾಲಿನ್ಯದಿಂದ ತುಂಬಿವೆ.
ಇನ್ನೂ ಕೆಟ್ಟ ವಿಷಯವೆಂದರೆ, ಈ “ಬೆಳವಣಿಗೆ” ಎಂದು ಕರೆಯಲ್ಪಡುವ ವಿಷಯವು ಇಲ್ಲಿರುವವರ ಜೀವನ ಮಟ್ಟವನ್ನು ಸುಧಾರಿಸುವ ಮಾದರಿಯಲ್ಲಿ ಇಲ್ಲ. ಇನ್ನೂ ಐಷಾರಾಮಿ ಕಾರುಗಳು ಮತ್ತು ಬೃಹತ್ ಗೋಪುರಗಳನ್ನು ನೋಡುತ್ತಿದ್ದೇವೆ. ಆದರೆ ಸಾಮಾನ್ಯ ಜನರ ಜೀವನ ಶೈಲಿ ಅಥವಾ ಗುಣಮಟ್ಟದ ಜೀವನ ನಡೆಸುವಂತಾಗಿದೆ ಎಂದರ್ಥವಲ್ಲ. ವೈಯಕ್ತಿಕವಾಗಿ, ನನ್ನ ಆರ್ಥಿಕತೆಯು ಸುಧಾರಿಸಿಲ್ಲ ಎಂದಿದ್ದಾರೆ.
ಆದರೂ, IISc ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಂತಹ ಕೆಲವು ಪ್ರದೇಶಗಳಲ್ಲಿ ನಿಶ್ಯಬ್ದ, ಹಸಿರುಮಯ ವಾತಾವರಣವು ಹಳೆಯ ಬೆಂಗಳೂರನ್ನು ನೆನಪು ಮಾಡುತ್ತದೆ. ಅದು ಕಣ್ಮರೆಯಾಗುವ ಮೊದಲು ಉಳಿದಿರುವ ಸ್ವಲ್ಪವನ್ನಾದರೂ ನಾವು ಸಂರಕ್ಷಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಸುದೀರ್ಘವಾಗಿ ರಿಯಾಕ್ಟ್ ಮಾಡಿದ್ದಾರೆ.
ಪರಾಗ್ ಎನ್ನುವವರು ಇದು ಇಡೀ ಬೆಂಗಳೂರಿನ ಪರಿಸ್ಥಿತಿ.. ಬೆಂಗಳೂರಿನಾದ್ಯಂತ ಕಥೆ ಎಂದಿದ್ದಾರೆ. ಮುಂದುವರಿದು ಬೆಂಗಳೂರು ಈಗಾಗಲೇ ವಿಶ್ವದ ಪಿಜಿ ರಾಜಧಾನಿಯಾಗಿದೆ. ಪ್ರತಿ ಎರಡನೇ ಪ್ಲಾಟ್ನಲ್ಲಿ ಈಗ ಬಹುಮಹಡಿ ಪೇಯಿಂಗ್ ಗೆಸ್ಟ್ಗಳಿವೆ. ಇದು ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ಆದರೆ ಬಿಬಿಎಂಪಿ ಬೇರೆ ರೀತಿಯಲ್ಲೇ ಕೆಲಸ ಮಾಡುತ್ತಿದೆ ಅಂತ ಹೇಳಿದ್ದಾರೆ.
ಪ್ರತಿಯೊಂದು ದೊಡ್ಡ ನಗರದಲ್ಲೂ ಇದು ಸಂಭವಿಸುತ್ತದೆ. ಉದಾಹರಣೆಗೆ ಯುಎಇಯನ್ನು ತೆಗೆದುಕೊಳ್ಳಿ ಸ್ಥಳೀಯರು ಅಬುಧಾಬಿ ಮತ್ತು ದುಬೈನಲ್ಲಿ ಇರಲ್ಲ ಅವರು ಉತ್ತರ ಎಮಿರೇಟ್ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಮತ್ತು ಲಂಡನ್ ಹಾಗೂ ದುಬೈನಲ್ಲಿರುವ ತಮ್ಮ ಆಸ್ತಿಗಳಿಂದ ಆದಾಯ ಗಳಿಸುತ್ತಾರೆ. ಬೆಂಗಳೂರಿನವರು ಶೀಘ್ರದಲ್ಲೇ ಅದೇ ರೀತಿ ಮಾಡಬೇಕಾಗಬಹುದು. ಮೈಸೂರು ಅಥವಾ ಇತರ ನಗರಗಳಿಗೆ ಸ್ಥಳಾಂತರಗೊಳ್ಳುವ ಸಂದರ್ಭ ಎದುರಾಗಬಹುದು ಅಂತ ಹೇಳಿದ್ದಾರೆ.