ಪ್ರೀತಿಯ ಮದುವೆ ಕೊನೆಗೊಂಡದ್ದು ಹತ್ಯೆಯಲ್ಲಿ – ಗಂಡನಿಂದ ಪತ್ನಿಗೆ ಭೀಕರ ಅಂತ್ಯ

ಬೆಂಗಳೂರು: ಬೆಂಗಳೂರಿನ ನಗರದ ಬಸವೇಶ್ವರನಗರದಲ್ಲಿ ಮಗುವನ್ನು ಅಜ್ಜಿಯ ಮನೆಗೆ ಕಳಿಸುವ ವಿಚಾರವಾಗಿ ಉಂಟಾದ ಜಗಳವೊಂದು ದಂಪತಿಯ ನಡುವೆ ಹತ್ಯೆಗೆ ಕಾರಣವಾಗಿದೆ ಇದರಲ್ಲಿ ಪ್ರೀತಿಸಿ ಮದುವೆ ಮಾಡಿಕೊಂಡ ಪತಿಯೇ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಕಳೆದ ಏಪ್ರಿಲ್ 24 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಬಸವೇಶ್ವರನಗರ ಪೊಲೀಸರು ಪತಿ ಲೋಕೇಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಲೋಕೇಶ್ ರಾಜಸ್ಥಾನ ಮೂಲದವನಾಗಿದ್ದು, ನಗರದ ಚಿಕ್ಕಪೇಟೆಯಲ್ಲಿ ಟೀ ಶಾಪ್ ಒಂದನ್ನು ನಡೆಸುತ್ತಿದ್ದನು. ಉತ್ತರ ಪ್ರದೇಶ ಮೂಲದ ನಮಿತಾ ಎಂಬವರನ್ನು ಮ್ಯಾಟ್ರಿಮೊನಿಯಲ್ಲಿ ನೋಡಿ, ಪರಿಚಯ ಮಾಡಿಕೊಂಡಿದ್ದನು. ನಂತರ, ಇಬ್ಬರೂ ಅಂತರ್ಜಾತಿಯವರಾಗಿದ್ದರಿಂದ ಮನೆಯಲ್ಲಿ ಮದುವೆಗೆ ವಿರೋಧ ಬರಬಹುದು ಎಂದು ಭಾವಿಸಿ ದೂರವಾಗಲು ಮುಂದಾಗಿದ್ದರು.
ಆದರೆ, ಲೊಕೇಶ್ ನಮಿತಾಳವನ್ನು ಪುಸಲಾಯಿಸಿ ಸ್ನೇಹಿತರಾಗಿರೋಣ ಎಂದು ಹೇಳಿಕೊಂಡು ನಂತರ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಇಬ್ಬರೂ ಜಾತಿ ಗಡಿಯನ್ನು ಮೀರಿ ಪ್ರೀತಿಸಿದ ನಂತರ ಮನೆಯವರ ಕೈಕಾಲು ಹಿಡಿದು ಮದುವೆಯನ್ನೂ ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿ ಜನರು ನೆಮ್ಮದಿಯಾಗಿ ಜೀವನ ಮಾಡಲು ಬಿಡುವುದಿಲ್ಲವೆಂದು ರಾಜ್ಯದ ಗಡಿ ದಾಟಿ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಕ್ಕಿದ್ದರು. ತಮ್ಮ 5 ವರ್ಷದ ದಾಂಪತ್ಯದಲ್ಲಿ ಒಂದು ಮಗುವೂ ಆಗಿದೆ.
ಪ್ರೀತಿಯಿಂದ ಬದುಕು ಕಟ್ಟಿಕೊಂಡ ಈ ಜೋಡಿಗೆ ಮೂರು ವರ್ಷದ ಮಗುವನ್ನು ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಳೆದ ಕೆಲವು ಸಮಯದಿಂದ ಕೌಟುಂಬಿಕ ಕಲಹ ಹೆಚ್ಚಾಗಿದ್ದು, ಮಕ್ಕಳು ಯಾರ ಬಳಿ ಇರಬೇಕು ಎಂಬ ವಿಚಾರದಲ್ಲಿ ಇಬ್ಬರ ನಡುವೆ ಪದೇಪದೇ ಜಗಳವಾಡುತ್ತಿದ್ದರು. ಗಂಡ ನನ್ನ ತಾಯಿ ಮನೆಗೆ ಮಗುವನ್ನು ಕಳಿಸುವುದಾಗಿ ಹೇಳಿದರೆ, ಪತ್ನಿ ತನ್ನ ತಾಯಿ ಮನೆಗೆ ಮಗುವನ್ನು ಕಳಿಸುವುದಾಗಿ ಹೇಳುತ್ತಿದ್ದಳು. ಈ ಘಟನೆ ದಿನೇ ದಿನೇ ನಡೆಯುತ್ತಿದ್ದು, ಜಗಳವೂ ಸಾಮಾನ್ಯವಾಗಿತ್ತು.
ಅದೊಂದು ದಿನ ಪತ್ನಿ ತನ್ನ ತಾಯಿಗೆ ಕರೆ ಮಾಡಿದಾಗ ಪತಿಯ ಬಗ್ಗೆ ಮಾತನಾಡಿದ್ದನ್ನು ಕೇಳಿದ ಲೋಕೇಶ್ ಕೋಪಗೊಂಡಿದ್ದನು. ಇದರಿಂದಾಗಿ ಜಗಳವು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಕೋಪದಲ್ಲಿ ಪತ್ನಿ ನಮಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಸ್ಥಳೀಯರಿಗೆ ವಿಷಯ ತಿಳಿದಿದ್ದು, ಮನೆ ಮಾಲೀಕನಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಲೋಕೇಶ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಮಿತಾ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಪ್ರಕರಣಗಳ ಅಡಿಯಲ್ಲಿ FIR ದಾಖಲಿಸಲಾಗಿದೆ.
ಇದೀಗ ಮಗು ತಾಯಿಯನ್ನು ಕಳೆದುಕೊಂಡು ತಾಯಿ ಪ್ರೀತಿಯಿಂದ ವಂಚಿತವಾಗಿದೆ. ಜೊತೆಗೆ ತಂದೆಯ ವಾತ್ಸಲ್ಯದಲ್ಲಾದರೂ ಬೆಳೆಯುತ್ತದೆ ಎಂದರೆ, ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಪಾಪಿ ಲೋಕೇಶ್ ಜೈಲು ಸೇರುತ್ತಿದ್ದಾರೆ. ತಾಯಿ ಸಾವು, ತಂದೆ ಜೈಲು ಪಾಲು ಆಗಿದ್ದು, ಜಗತ್ತಿನ ಅರಿವೇ ಇಲ್ಲದ ಕಂದಮ್ಮ ಅನಾಥರಂರೆ ಅಜ್ಜಿಯ ಪಾಲನೆಯಲ್ಲಿ ಬೆಳೆಯಬೇಕಿದೆ. ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರೂ ಒಬ್ಬರ ತೀರ್ಮಾನಕ್ಕೆ ತಲೆಬಾಗಿದ್ದರೆ ಮಗುವಿಗೆ ಅಪ್ಪ-ಅಮ್ಮ ಇಬ್ಬರ ಪ್ರೀತಿಯೂ ಸಿಗುತ್ತಿತ್ತು. ಅನಾಥ ಭಾವ ಬಾರದೇ ಎಲ್ಲರಂತೆ ಬೆಳೆದು ಉತ್ತಮ ಜೀವನ ರೂಪಿಸಿಕೊಳ್ಳಬಹುದಿತ್ತು. ಇದೀಗ ಮಗುವಿನ ಭವಿಷ್ಯದ ಮೇಲೆ ಕಾರ್ಮೋಡ ನಿರ್ಮಾಣವಾದಂತಾಗಿದೆ.
ಈ ದುರ್ಘಟನೆಯಿಂದ ಒಂದು ನಿರಪರಾಧಿ ಜೀವವನ್ನೇ ಕಳೆದುಕೊಂಡ ಕುಟುಂಬ, ಇನ್ನು ಮುಂದೆ ಪುಟ್ಟ ಮಗುವಿನ ಭವಿಷ್ಯ ಹೇಗೆ ಎಂಬ ಪ್ರಶ್ನೆ ತಲೆ ಎತ್ತುತ್ತಿದೆ. ಸಂಸಾರದಲ್ಲಿ ನಂಬಿಕೆಯ ಕೊರತೆ, ಕುಳಿತು ಸಮಾಧಾನದಿಂದ ಮಾತನಾಡಿ ಜಗಳ ಬಗೆಹರಸಿಕೊಳ್ಳುವ ಅಭಾವ ಮತ್ತು ಸಾಂಸ್ಕೃತಿಕ ಭಿನ್ನತೆಗಳು ಇಂತಹ ಭೀಕರ ಅಂತ್ಯಕ್ಕೆ ಹೇಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ ಆಗಿದೆ.