754 ಕೋಟಿ ಭಾರೀ ವಂಚನೆ -ಬಾಹುಬಲಿ ನಾಯಕ ಪುತ್ರನ ಬಂಧನ

ಉತ್ತರಪ್ರದೇಶ : ಬರೋಬ್ಬರಿ 754 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಆರೋಪದಡಿಯಲ್ಲಿ ಉತ್ತರಪ್ರದೇಶದ ಬಾಹುಬಲಿ ನಾಯಕ ಪಂಡಿತ್ ಹರಿಶಂಕರ್ ತಿವಾರಿಯವರ ಪುತ್ರ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ಪ್ರಕರಣ ಸಂಬಂಧ ಇಡಿಯಿಂದ ಗೋರಖ್ಪುರ ಹಾತಾ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ವಿನಯ್ ಶಂಕರ್ ತಿವಾರಿಯವರನ್ನು ಬಂಧಿಸಲಾಗಿದೆ. ವಿನಯ್ ಶಂಕರ್ ತಿವಾರಿ ಗೋರಖ್ಪುರದ ಚಿಲ್ಲುಪಾರ್ ದ ಮಾಜಿ ಶಾಸಕ. ಪ್ರಸ್ತುತ ಅವರು ಸಮಾಜವಾದಿ ಪಕ್ಷದಲ್ಲಿದ್ದಾರೆ.
ವಿನಯ್ ಶಂಕರ್ ತಿವಾರಿಯವರನ್ನು ಲಕ್ನೋದಲ್ಲಿರುವ ಅವರ ಮನೆಯಲ್ಲಿ ಇಡಿ ಬಂಧಿಸಿದೆ. ಮಾಜಿ ಶಾಸಕರಲ್ಲದೆ ಗಂಗೋತ್ರಿ ಎಂಟರ್ಪ್ರೈಸಸ್ನ ಜನರಲ್ ಮ್ಯಾನೇಜರ್ ಅಜಿತ್ ಪಾಂಡೆಯವರನ್ನೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ತಿವಾರಿಯವರ ಗೋರಖ್ಪುರ, ಲಕ್ನೋ, ದೆಹಲಿ, ಮುಂಬೈ ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು. ತಡರಾತ್ರಿಯವರೆಗೆ ನಡೆದ ಕಾರ್ಯಾಚರಣೆಯ ನಂತರ ಅವರನ್ನು ಬಂಧಿಸಲಾಗಿದೆ. ಇಡಿಯವರು ವಿನಯ್ ಶಂಕರ್ ತಿವಾರಿಯವರ ಸಂಬಂಧಿ ಮಹಾರಾಜಗಂಜ್ನ ಜಿಲ್ಲಾ ಪಂಚಾಯತ್ ಸದಸ್ಯ ದೀಪಕ್ ಪಾಂಡೆಯವರ ಮನೆ ಮೇಲೂ ದಾಳಿ ನಡೆಸಿದೆ.
ತಿವಾರಿ ಕುಟುಂಬದ 12 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಇಡಿ!
ಇಡಿ ಅಧಿಕಾರಿಗಳು ತಿವಾರಿ ಕುಟುಂಬದ ಗಂಗೋತ್ರಿ ಎಂಟರ್ಪ್ರೈಸಸ್ನ ಸುಮಾರು 30.86 ಕೋಟಿ ರೂಪಾಯಿ ಮೌಲ್ಯದ 12 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಗಂಗೋತ್ರಿ ಎಂಟರ್ಪ್ರೈಸ್ ತಿವಾರಿ ಕುಟುಂಬಕ್ಕೆ ಸೇರಿದ ಕಂಪನಿಯಾಗಿದೆ. ಕಳೆದ ವರ್ಷ ಮಾರ್ಚ್ 18, 2024 ರಂದು ಇಡಿ ಕ್ರಮ ಕೈಗೊಂಡಿತ್ತು. ಗಂಗೋತ್ರಿ ಎಂಟರ್ಪ್ರೈಸಸ್ ಬ್ಯಾಂಕ್ ಆಫ್ ಇಂಡಿಯಾ ಕ್ಲಸ್ಟರ್ನಿಂದ 754 ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ರೀತಾ ತಿವಾರಿಯವರನ್ನು ಮುಖ್ಯ ಆರೋಪಿಯನ್ನಾಗಿ ಮಾಡಿದೆ. ರೀತಾ ತಿವಾರಿ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರ ಪತ್ನಿ. ಇದರ ಜೊತೆಗೆ ಅಜಿತ್ ಪಾಂಡೆ, ಕಂಪನಿಯ ಪ್ರವರ್ತಕರು, ನಿರ್ದೇಶಕರು, ರಾಯಲ್ ಎಂಪೈರ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಕಂದರ್ಪ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇಡಿಯಿಂದ ಮನಿ ಲಾಂಡರಿಂಗ್ ಪ್ರಕರಣ ದಾಖಲು
ಗಂಗೋತ್ರಿ ಎಂಟರ್ಪ್ರೈಸಸ್ನ ನಿರ್ದೇಶಕರು, ಪ್ರವರ್ತಕರು ಮತ್ತು ಖಾತರಿದಾರರು ಶಾಮೀಲಾಗಿ ಬ್ಯಾಂಕುಗಳಿಂದ ಪಡೆದ 754 ಕೋಟಿ ರೂಪಾಯಿಗಳ ನಗದು ಸಾಲದ ವಂಚನೆ ನಡದಿದೆ ಎಂದು ಇಡಿ ಆರೋಪಿಸಿದೆ. ಬ್ಯಾಂಕ್ ಆಫ್ ಇಂಡಿಯಾದ 7 ಕನ್ಸೋರ್ಟಿಯಂನಿಂದ ಕಂಪನಿಯು 1129.44 ಕೋಟಿ ರೂಪಾಯಿಗಳ ನಗದು ಸಾಲದ ಮಿತಿಯನ್ನು ಪಡೆದುಕೊಂಡಿದೆ ಎಂದು ಇಡಿ ಹೇಳಿದೆ. ಈ ನಗದು ಮಿತಿಯನ್ನು ಸಹವರ್ತಿ ಕಂಪನಿಗಳಿಗೆ ವರ್ಗಾಯಿಸಿ ಖಾಸಗಿ ಆಸ್ತಿಗಳನ್ನು ಖರೀದಿಸಲಾಗಿದೆ. ಇದರಲ್ಲಿ ಮಾಜಿ ಶಾಸಕ ವಿನಯ್ ಶಂಕರ್, ರೀತಾ ತಿವಾರಿ ಮತ್ತು ಅಜಿತ್ ಪಾಂಡೆ ಮುಖ್ಯ ಆರೋಪಿಗಳಾಗಿದ್ದಾರೆ. ಬ್ಯಾಂಕುಗಳ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು. ಸಿಬಿಐನ ಎಫ್ಐಆರ್ ಆಧಾರದ ಮೇಲೆ ಇಡಿಯವರು ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದ್ದರು. ಇಡಿಯವರು ಈವರೆಗೆ ಈ ಪ್ರಕರಣದಲ್ಲಿ 103 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.