ಭಾರತದೊಳಗೆ ನುಸುಳಲು ಯತ್ನಿಸಿದ 7 ಭಯೋತ್ಪಾದಕರ ನಾಶ: ಪಾಕ್ ಸೇನೆಗೆ ತೀರ ಕಠಿಣ ಪ್ರತಿಕ್ರಿಯೆ

ನವದೆಹಲಿ: ಪಾಕಿಸ್ತಾನ ಸೈನಿಕರ ಬೆಂಬಲದೊಂದಿಗೆ ಭಾರತ ಪಾಕ್ ಗಡಿಯಲ್ಲಿ ಭಾರತದೊಳಗೆ ಒಳ ನುಸುಳಲು ಯತ್ನಿಸುತ್ತಿದ್ದ 7 ಜನ ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ನಲ್ಲಿ ಈ ಘಟನೆ ನಡೆದಿದೆ. ಧಂಧರ್ ಪೋಸ್ಟ್ನಿಂದ ಗಡಿಯುದ್ದಕ್ಕೂ ಗುಂಡು ಹಾರಿಸುವ ಮೂಲಕ ಪಾಕಿಸ್ತಾನಿ ರೇಂಜರ್ಗಳು ಈ ಉಗ್ರರು ಭಾರತದೊಳಗೆ ನುಸುಳಲು ಸಹಾಯ ಮಾಡುತ್ತಿದ್ದರು ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ತಿಳಿಸಿದೆ. ಈ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಸೇನಾ ಪೋಸ್ಟನ್ನು ಕೂಡ ಸೇನೆ ಹೊಡೆದುರುಳಿಸಿದೆ. ಮೇ 8 ಮತ್ತು 9 ರ ಮಧ್ಯರಾತ್ರಿ ಸಾಂಬಾ ಸೆಕ್ಟರ್ಗೆ ನುಸುಳುತ್ತಿದ್ದಾಗ ಭಯೋತ್ಪಾದಕರ ಗುಂಪು ಭಾರತದ ಕಣ್ಗಾವಲು ಗ್ರಿಡ್ನಲ್ಲಿ ಕಾಣಿಸಿದ್ದಾರೆ ಕೂಡಲೇ ಅಲರ್ಟ್ ಆದ ಬಿಎಸ್ಎಫ್ ಪಡೆಗಳು ಈ ಒಳನುಸುಳುವಿಕೆ ಪ್ರಯತ್ನವನ್ನು ತಟಸ್ಥಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಜೊತೆಗೆ ಪಾಕ್ ಪೋಸ್ಟ್ ಧಂಧರ್ಗೆ ವ್ಯಾಪಕ ಹಾನಿಯಾಗಿದೆ ಎಂದು ಪಾಕ್ ಸೇನಾ ಪೋಸ್ಟ್ ನಾಶಪಡಿಸುವ ವೀಡಿಯೊವನ್ನು ಹಂಚಿಕೊಂಡು ಮಾಹಿತಿ ನೀಡಲಾಗಿದೆ.
ಪಾಕಿಸ್ತಾನಿ ಸೇನೆಯು ಅಲ್ಲಿನ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಲು ಹೇಗೆ ಸಹಾಯ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ಪಾಕಿಸ್ತಾನದ ವಾಸ್ತವತೆಯನ್ನು ಬಹಿರಂಗಪಡಿಸುತ್ತಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತಿದೆ ಎಂದು ಭಾರತ ಪದೇ ಪದೇ ಆರೋಪಿಸಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಈ ಘಟನೆ.
ಪಾಕಿಸ್ತಾನಿ ಪಡೆಗಳು ಗಡಿ ಮತ್ತು ಎಲ್ಒಸಿ ಬಳಿಯ ಭಾರತೀಯ ಠಾಣೆಗಳು ಮತ್ತು ಹಳ್ಳಿಗಳ ಮೇಲೆ ನಿರಂಯರ ಗುಂಡಿನ ದಾಳಿಯನ್ನು ಮುಂದುವರೆಸಿವೆ ಇದಕ್ಕೆ ಭಾರತೀಯ ಪಡೆಗಳು ಕೂಡ ಸೂಕ್ತ ಪ್ರತ್ಯುತ್ತರವನ್ನು ನೀಡಿ, ಹಲವಾರು ಪಾಕಿಸ್ತಾನಿ ಸೇನಾ ಠಾಣೆಗಳನ್ನು ನಾಶಪಡಿಸಿವೆ. ಜಮ್ಮು, ಶ್ರೀನಗರ ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಹಲವಾರು ಸ್ಥಳಗಳಲ್ಲಿ ಹಾಗೂ ಗಡಿಯ ಸಮೀಪವಿರುವ ನಗರಗಳಲ್ಲಿ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ನಿನ್ನೆ ರಾತ್ರಿಯಿಡೀ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.
ಹಾಗೆಯೇ ಇಂದು ಬೆಳಗ್ಗೆ ಇಲ್ಲಿನ ಸ್ಥಳೀಯ ವಾಯುಪಡೆ ಕೇಂದ್ರದಿಂದ ನಾಗರಿಕರಿಗೆ ಎಚ್ಚರದಿಂದ ಇರುವಂತೆ ಸೈರನ್ ಮೊಳಗಿಸಿ ಅಲರ್ಟ್ ಮಾಡಲಾಯಿತು. ಜಮ್ಮು ಕಾಶ್ಮೀರದ ಹಲವು ಗಡಿಗಳಲ್ಲಿ ಇರುವ ನಾಗರಿಕರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲೇ ಇದ್ದವರನ್ನು ಮನೆಯಿಂದ ಹೊರಗೆ ಬಾರದೇ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ. ಹಾಗೆಯೇ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಪಾಕಿಸ್ತಾನ ಗಡಿ ಭಾಗದ ರಾಜ್ಯಗಳ ಕನಿಷ್ಠ 24 ವಿಮಾನ ನಿಲ್ದಾಣಗಳನ್ನು ಸಹ ಮುಚ್ಚಲಾಗಿದೆ.
ಕಳವಳಕಾರಿ ಎಂದ ಚೀನಾ
ಇನ್ನೊಂದೆಡೆ ಭಾರತ ಪಾಕ್ ನಡುವಣ ಉಂಟಾಗಿರುವ ಪ್ರಸ್ತುತ ಸ್ಥಿತಿಯೂ ಕಳವಳಕರಿಯಾಗಿದೆ ಎಂದು ಚೀನಾ ಹೇಳಿದೆ. ಎರಡೂ ದೇಶಗಳು ಈ ವಿಚಾರದಲ್ಲಿ ಸಂಯಮದಿಂದ ವರ್ತಿಸುವಂತೆ ಚೀನಾ ಮನವಿ ಮಾಡಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದು, ಭಾರತ ಮತ್ತು ಪಾಕಿಸ್ತಾನವು ಶಾಂತಿ ಮತ್ತು ಸ್ಥಿರತೆಯ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ಹಾಗೂ ವಿಶ್ವಸಂಸ್ಥೆಯ ಚಾರ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಹಾಗೂ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಅವರು ಕರೆ ನೀಡಿದ್ದಾರೆ.
ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಚೀನಾ ಖಂಡಿಸುತ್ತದೆ ಎಂದು ಅವರು ಪುನರುಚ್ಚರಿಸಿದರು. ಭಾರತದ ದಾಳಿಗಳಿಗೆ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ ಎಂಬ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ನಾವು ನಿನ್ನೆ ಚೀನಾದ ನಿಲುವನ್ನು ಹಂಚಿಕೊಂಡಿದ್ದೇವೆ . ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಭಾರತ ಮತ್ತು ಪಾಕಿಸ್ತಾನಗಳು ಯಾವಾಗಲೂ ಪರಸ್ಪರ ನೆರೆಹೊರೆಯವರಾಗಿರುತ್ತವೆ. ಅವರಿಬ್ಬರೂ ಚೀನಾದ ನೆರೆಯ ರಾಷ್ಟ್ರಗಳು. ಹೀಗಾಗಿ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಯಾವುದೇ ನಿರ್ಧಾರವನ್ನು ಎರಡೂ ದೇಶಗಳುತೆಗೆದುಕೊಳ್ಳದಂತೆ ಎರಡೂ ಕಡೆಯವರನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.