ಧಾರವಾಡದಲ್ಲಿ ಮಾಜಿ ಯೋಧ ಸೇರಿ ಐವರಿಗೆ ₹24 ಲಕ್ಷ ವಂಚನೆ: ಜಮೀನು ಬದಲು ಪೇಪರ್ ಬಂಡಲ್ ಕೊಟ್ಟು ಎಸ್ಕೇಪ್ ಆದ ತಾಯಿ-ಮಗಳು!

ಧಾರವಾಡ : ಇತ್ತೀಚೆಗೆ ಸಮಾಜದಲ್ಲಿ ಹಣದ ಹೆಸ್ರಲ್ಲಿ ವಂಚನೆ ಕೇಸ್ ಗಳು ಹೆಚ್ಚುತ್ತಿದ್ದು, ಆ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ.
ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಡಬೇಕಿದ್ದ ಹಣದ ಬದಲಾಗಿ ಪೇಪರ್ಗಳಿರುವ ಬಂಡಲ್ ಅನ್ನ ಕೊಟ್ಟು ಮಾಜಿ ಯೋಧ ಸೇರಿ ಐವರಿಗೆ ವಂಚಿಸಲಾಗಿದೆ.
ಧಾರವಾಡದಲ್ಲಿ ಈ ಘಟನೆ ನಡೆದಿದೆ
ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಾಜಿ ಯೋಧ ಸುರೇಶ ತಡಕೋಡ, ಧರ್ಮೇಂದ್ರ ರಾಯನಗೌಡರ ಹಾಗೂ ಸುರೇಶ ಬಳಗೇರ ವಂಚನೆಗೆ ಒಳಗಾದ ದುರ್ದೈವಿಗಳಾಗಿದ್ದಾರೆ.

ಇವರು ಧಾರವಾಡ ತಾಲೂಕಿನ ಶಿವಳ್ಳಿಯ ಸುವರ್ಣಾ ಮುದ್ದಿ ಎಂಬುವವರಿಂದ 6 ಎಕರೆ ಜಮೀನು ಖರೀದಿಗೆ ಮುಂದಾಗಿ, 2023ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಖರೀದಿ ಒಪ್ಪಂದ ಕೂಡ ಮಾಡಿಕೊಂಡು 24 ಲಕ್ಷ ರೂಪಾಯಿ ಕೊಟ್ಟಿದ್ದರು. ಆದರೆ, ಜಮೀನು ದರ ಹೆಚ್ಚಾಗಿದ್ದರಿಂದ ಸುವರ್ಣಾ ಮುದ್ದಿ ಜಮೀನು ಮಾರಲು ಹಿಂದೇಟು ಹಾಕಿದ್ದು, ಖರೀದಿ ಒಪ್ಪಂದ ರದ್ದು ಮಾಡಿಕೊಳ್ಳೋಣ ಎಂದಿದ್ದರು.
ಇದಕ್ಕೆ ಒಪ್ಪಿದ ಎಲ್ಲರೂ ಉಪ ನೋಂದಣಿ ಕಚೇರಿಗೆ ಸಹಿ ಹಾಕಲು ಬಂದಿದ್ದರು. ಖರೀದಿ ಒಪ್ಪಂದ ರದ್ದತಿ ದಾಖಲೆಗಳಿಗೆ ಸಹಿ ಮಾಡಿ ಹೊರಗೆ ಬಂದಿದ್ದಾರೆ. ಈ ವೇಳೆ ಸುವರ್ಣಾ ಮುದ್ದಿ ಮತ್ತು ಪುತ್ರಿ ದಾನೇಶ್ವರಿ ಹಣ ಎಂದು ಪೇಪರ್ ಬಂಡಲ್ ಕೊಟ್ಟು ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.