20 ವರ್ಷಗಳ ಹಿಂದೆ ಸುನಾಮಿ ವೇಳೆ ತಾನು ರಕ್ಷಿಸಿದ ಹುಡುಗಿಯ ಮದ್ವೆ ಮಾಡಿಸಿದ ಐಎಎಸ್ ಅಧಿಕಾರಿ.

2004 ರಲ್ಲಿ ಜಪಾನ್, ಇಂಡೋನೇಷ್ಯಾ, ಭಾರತ ಸೇರಿದಂತ ವಿವಿಧ ದೇಶಗಳ ಕರಾವಳಿಗೆ ಬಡಿದ ಸುನಾಮಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ, ಅದೊಂದು ಆ ದಶಕದ ದೊಡ್ಡ ಪ್ರಾಕೃತಿಕ ವಿಕೋಪವೆನಿಸಿತು. ಅನೇಕರು ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡರು ಭಾರತದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ದಕ್ಷಿಣದ ರಾಜ್ಯದ ತಮಿಳುನಾಡಿನ ಕರಾವಳಿಗೆ ಇದು ಭಾರಿ ಆಘಾತ ನೀಡಿತ್ತು. 20 ವರ್ಷಗಳ ಹಿಂದೆ ಸಂಭವಿಸಿದಂತಹ ಈ ಸುನಾಮಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಪುಟ್ಟ ಹುಡುಗಿಯೊಬ್ಬಳನ್ನು ರಕ್ಷಣೆ ಮಾಡಿದ್ದರು. ಆ ಹುಡುಗಿ ಇಂದು ಮದುವೆ ವಯಸ್ಸಿಗೆ ಬಂದು ನಿಂತಿದ್ದು, ತಾವು ರಕ್ಷಿಸಿದ ಆ ಹುಡುಗಿಯನ್ನು ಸ್ವತಃ ಆ ಐಎಎಸ್ ಅಧಿಕಾರಿ ಮದುವೆ ಮಾಡಿ ಕೊಡುವ ಮೂಲಕ ಕನ್ಯಾದಾನದಂತಹ ಮಹತ್ಕಾರ್ಯ ಮಾಡಿದ್ದಾರೆ.
ಇದೊಂದು ಹೃದಯವನ್ನು ಬೆಚ್ಚಗಾಗಿಸುವ ಭಾವುಕ ಕತೆ. ಐಎಎಸ್ ಅಧಿಕಾರಿ ರಾಧಾಕೃಷ್ಣನ್ ಅವರು 2004 ಸುನಾಮಿಯಲ್ಲಿ ಬದುಕುಳಿದ ತಮಿಳುನಾಡಿನ ಮೀನಾ ಎಂಬಾಕೆಯ ವಿವಾಹವನ್ನು ತಂದೆ ತಾಯಿಯಂತೆ ತಾನೇ ಮುಂದೆ ನಿಂತು ನೆರವೇರಿಸಿದ್ದಾರೆ. 2004 ರ ಡಿಸೆಂಬರ್ 26 ರಂದು ತಮಿಳುನಾಡಿ ಕರಾವಳಿಗೆ ಅಪ್ಪಳಿಸಿದ ಸುನಾಮಿ ಅಲ್ಲಿ ಸುಮಾರು 6,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿತ್ತು. ಈ ವೇಳೆ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರಾಧಾಕೃಷ್ಣನ್ ಅಲ್ಲಿ ಪರಿಹಾರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಅಲ್ಲಿನ ಕೀಚನ್ಕುಪ್ಪಂ ಪ್ರದೇಶದ ಅವಶೇಷಗಳ ಬಳಿ ಪುಟ್ಟ ಮಗು ಮೀನಾ ಅಳುವುದು ಕೇಳಿಸಿ ಸ್ಥಳಕ್ಕೆ ತೆರಳಿದ ಅವರು ಆಕೆಯ ರಕ್ಷಣೆ ಮಾಡಿದ್ದರು.