ಮಿರ್ಜನ್ ಕೋಟೆಯಿಂದ 16ನೇ ಶತಮಾನದ ಪುರಾತತ್ವ ಸಂಪತ್ತು ಪತ್ತೆ!

ಉತ್ತರ ಕನ್ನಡ: ಪ್ರವಾಸಿಗರ ಪಾಲಿನ ಸ್ವರ್ಗದಂತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಸಾರುವ ಹಲವಾರು ತಾಣಗಳಿವೆ. ಅವುಗಳಲ್ಲಿ 54 ವರ್ಷಗಳ ಕಾಲ ಗೆರ್ಸೊಪ್ಪ ಪ್ರದೇಶವನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಮಿರ್ಜನ್ ಕೋಟೆಯಲ್ಲಿ 16 ನೇ ಶತಮಾನದ ಅವಶೇಷಗಳು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾದಿಂದ ಸುಮಾರು ಎಂಟು ಕಿ.ಮೀ. ದೂರದೊಳಗಿನ ಮಿರ್ಜಾನ್ ಎನ್ನುವ ಊರಿನಲ್ಲಿದೆ ಈ ಕೋಟೆ. ಮಿರ್ಜಾನ್ನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸಪೂರ ರಸ್ತೆಯಲ್ಲಿ ಒಂದು ಕಿ.ಮೀ.ದೂರ ನಡೆದರೆ ಈ ಬೃಹತ್ ಕೋಟೆ ಕಣ್ಣಿಗೆ ಕಾಣುತ್ತದೆ.
ರೈನಾ ಡ ಪಿಮೆಂಟಾ (ಕಾಳು ಮೆಣಸಿನ ರಾಣಿ) ಎಂದೇ ಹೆಸರುವಾಸಿಯಾಗಿದ್ದ ತುಳುವ – ಸಲುವ ರಾಜವಂಶದ ರಾಣಿ ಚೆನ್ನಭೈರಾದೇವಿಯವರು ಈ ಕೋಟೆಯನ್ನು 1552 ರಿಂದ 1606ರ ವರೆಗೆ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ 54 ವರ್ಷಗಳ ಕಾಲ ಗೆರ್ಸೊಪ್ಪ ಪ್ರದೇಶವನ್ನು ಆಳಿದರು.
ರಾಣಿ ಚೆನ್ನಭೈರಾದೇವಿಯವರು ಮಿರ್ಜನ್ ಕೋಟೆಯನ್ನು ಕಾಳು ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿ ಮತ್ತು ಅರೇಬಿಯನ್ ಸಮುದ್ರವನ್ನು ನಿಯಂತ್ರಿಸುವ ರಕ್ಷಣಾತ್ಮಕ ಕೋಟೆಯನ್ನಾಗಿಸಿಕೊಂಡಿದ್ದರು. ಅಲ್ಲದೇ ಇಲ್ಲಿಂದಲೇ ಪೋರ್ಚುಗೀಸ್, ಡಚ್ ಮತ್ತು ಫ್ರೆಂಚ್ ದೇಶಗಳಿಗೆ ಮಸಾಲೆಗಳನ್ನು, ವಿಶೇಷವಾಗಿ ಮೆಣಸನ್ನು ರಫ್ತು ಮಾಡುತ್ತಿದ್ದರು.
ಹೀಗಾಗಿ ರಾಣಿ ಚೆನ್ನಭೈರಾದೇವಿಯವರನ್ನು ಕಾಳುಮೆಣಸಿನ ರಾಣಿ ಎಂದು ಕರೆಯಲಾಗುತ್ತಿತ್ತು. ಇದೀಗ 16 ನೇ ಶತಮಾನದ ಕೋಟೆಯಿಂದ ಪೋರ್ಚುಗೀಸ್ ಚಿನ್ನದ ನಾಣ್ಯಗಳು, ಫಿರಂಗಿ ಚೆಂಡುಗಳು, ಚೀನೀ ಪಿಂಗಾಣಿ ವಸ್ತುಗಳು ಮತ್ತು ಜೇಡಿಮಣ್ಣಿನ ಮಾತ್ರೆಗಳ ಅವಶೇಷವನ್ನು ಪುರಾತತ್ವ ಇಲಾಖೆ ಕಂಡು ಹಿಡಿದಿದೆ.
ರಾಣಿ ಚೆನ್ನಭೈರಾದೇವಿಯ ಬಳಿಕ ಬ್ರಿಟಿಷರು ಈ ಕೋಟೆಯನ್ನು ಅತಿಕ್ರಮೇಣ ಮಾಡಿ ಇದನ್ನು ಕಾಳು ಮೆಣಸಿನಕಾಯಿ, ಶ್ರೀಗಂಧ ವನ್ನು ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದರು, ಹಾಗೆ ಇಲ್ಲಿಂದಲೇ ಇಂಗ್ಲೆಂಡ್ ಗೆ ರಫ್ತು ಮಾಡುತ್ತಿದ್ದರು ಎನ್ನಲಾಗಿದೆ. ಇದರ ಜೊತೆ ಜಾಯಿಕಾಯಿ, ಕ್ಯಾಸಿಯಾ, ಉಪ್ಪಿನಕಾಯಿ, ತೆಂಗಿನ ಎಣ್ಣೆ ಸೇರಿದಂತೆ ಇನ್ನಿತರ ವಸ್ತುವನ್ನು ರಫ್ತು ಮಾಡಲಾಗುತ್ತಿತ್ತು.
ಭಾರತೀಯ ಪುರಾತತ್ವ ಸಮೀಕ್ಷೆ (ASI) ಹಲವಾರು ಪುರಾತತ್ತ್ವ ಶಾಸ್ತ್ರದ ಉತ್ಪನನಗಳನ್ನು ನಡೆಸಿದ್ದು, ಇದರಲ್ಲಿ ಮಧ್ಯಕಾಲೀನ ಯುಗದ ಲ್ಯಾಟರೈಟ್ ನಿರ್ಮಾಣಗಳು ಪತ್ತೆಯಾಗಿವೆ.
ಕೋಟೆಯಲ್ಲಿ ಕಂಡುಬಂದ ಆವಿಷ್ಕಾರಗಳಲ್ಲಿ ವೈಸರಾಯ್ ಕಾಂಡೆ ಡಿ ಸರ್ಜೆದಾಸ್ ಕಾಲದ ಪೋರ್ಚುಗೀಸ್ ಚಿನ್ನದ ನಾಣ್ಯಗಳು, ಫಿರಂಗಿ ಚೆಂಡುಗಳು, ಚೀನೀ ಪಿಂಗಾಣಿ ವಸ್ತುಗಳು ಮತ್ತು ಇಸ್ಲಾಮಿಕ್ ಲಿಪಿಯಲ್ಲಿ ಕೆತ್ತಿದ ಮಣ್ಣಿನ ಮಾತ್ರೆಗಳು ಪತ್ತೆಯಾಗಿವೆ.