ಅಯ್ಯಪ್ಪ ಸ್ವಾಮಿ ಭಕ್ತರಿಗಾಗಿ ಹುಬ್ಬಳ್ಳಿಯಿಂದ 14 ರೈಲುಗಳ ಸೌಲಭ್ಯ

ಬೆಂಗಳೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತರಿಗಾಗಿ ನೈಋತ್ಯ ರೈಲ್ವೇ (South west Railways) ವತಿಯಿಂದ 14 ವಿಶೇಷ ರೈಲುಗಳ ಕೊಡುಗೆ ನೀಡಿದೆ. ಈ 14 ಎಕ್ಸ್ಪ್ರೆಸ್ ರೈಲುಗಳು ಹುಬ್ಬಳ್ಳಿ ಮತ್ತು ಕೊಲ್ಲಂ ಜಂಕ್ಷನ್ಗಳ ನಡುವೆ ಬೆಂಗಳೂರು ಮೂಲಕ ಹಾದು ಹೋಗಲಿವೆ. ಇದರಿಂದಾಗಿ ಶಬರಿಮಲೆಗೆ ತೆರಳಲಿರುವ ಅಯ್ಯಪ್ಪ ಭಕ್ತರ ಪ್ರಯಾಣವು ಸುಲಭವಾಗಲಿದೆ.

ಈ ವಿಶೇಷ ರೈಲು ಸಂಚಾರ ಯಾವಗಿನಿಂದ ಶುರು?
ಈ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲುಗಳು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 28ರ ವರೆಗೆ ಭಾನುವಾರಗಳಂದು ಪ್ರಯಾಣ ಸೌಲಭ್ಯ ಒದಗಿಸಲಿವೆ. ಮಧ್ಯಾಹ್ನ 3.15 ರಿಂದ ಹುಬ್ಬಳ್ಳಿಯಿಂದ ಹೊರಡುವ ರೈಲುಗಳು, ಮರುದಿನ ಮಧ್ಯಾಹ್ನ 12.55 ಕ್ಕೆ ಕೊಲ್ಲಂ ತಲುಪಲಿವೆ. ಮರಳಿ ಬರುವಾಗ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 29 ರವರೆಗೆ ರೈಲುಗಳು ಸೊಮವಾರಗಳಂದು ಕಾರ್ಯನಿರ್ವಹಿಸಲಿವೆ. ಸಂಜೆ 5 ಗಂಟೆಗೆ ಕೊಲ್ಲಂನಿಂದ ವಾಪಾಸಾಗುವ ರೈಲುಗಳು ಮರುದಿನ ಸಂಜೆ 6.30 ಕ್ಕೆ ಹುಬ್ಬಳ್ಳಿ ತಲುಪಲಿವೆ.
ವಿಶೇಷ ರೈಲುಗಳಲ್ಲಿರುವ ಸೌಲಭ್ಯಗಳೇನು?
ಈ ರೈಲುಗಳಲ್ಲಿ ಒಂದು ಎಸಿ-2 ಟೈರ್, ಎರಡು- ಎಸಿ 3 ಟೈರ್ , 12 ಸ್ಲೀಪರ್ಗಳು ಮತ್ತು 5 ಜನರಲ್ ವಿಭಾಗಗಳು ಸೇರಿದಂತೆ 22 ರೈಲ್ವೆ ಬೋಗಿಗಳ ಸೌಲಭ್ಯವಿರಲಿದೆ. ವಿಶೇಷ ರೈಲುಗಳು ಮಾರ್ಗ ಮಧ್ಯೆ ಹಾವೇರಿ, ದಾವಣಗೆರೆ, ಬಿರೂರು, ಅರಸಿಕೆರೆ, ತುಮಕೂರು, ಎಸ್ಎಂವಿಟಿ(Sir. M Visvesvarayya Terminal), ಬೆಂಗಳೂರು ಮತ್ತು ಕೃಷ್ಣರಾಜಪುರಂ ಈ ಎಲ್ಲಾ ಜಾಗಗಳಲ್ಲಿ ನಿಲುಗಡೆ ಇರಲಿದೆ. ಶಬರಿಮಲೆಗೆ ತೆರಳುವ ಭಕ್ತಾದಿಗಳು ದೇವಸ್ಥಾನಕ್ಕೆ ಹತ್ತಿರವಿರುವ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಇಳಿಯಬಹುದೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.