ಅತಿಯಾದ ಆತ್ಮವಿಶ್ವಾಸ, ಜನರ ಮಾತು ಕೇಳದ್ದಕ್ಕೆ ಬಿಜೆಪಿಗೆ ಹಿನ್ನಡೆ – ಆರ್ಎಸ್ಎಸ್.
ನವದೆಹಲಿ: ಬಿಜೆಪಿಗರಿಗೆ ಅತಿಯಾದ ಆತ್ಮವಿಶ್ವಾಸ, ಜನರ ಮಾತು ಕೇಳದ್ದಕ್ಕೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖವಾಣಿ ಆರ್ಗನೈಸರ್ ಚಾಟಿ ಬೀಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದನ್ನು ಪ್ರಸ್ತಾಪಿಸಿ ಆರ್ಎಸ್ಎಸ್ ಸದಸ್ಯ ರತನ್ ಶಾರದಾ ಅವರು ಆರ್ಗನೈಸರ್ನಲ್ಲಿ ಬಿಜೆಪಿ ಸೋತಿದ್ದು ಎಲ್ಲಿ? ಏನು ಬದಲಾವಣೆ ಮಾಡಬೇಕು ಇತ್ಯಾದಿ ವಿಚಾರದ ಬಗ್ಗೆ ಲೇಖನ ಬರೆದಿದ್ದಾರೆ.ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಿ ನೋಡಬಾರದು.
ನರೇಂದ್ರ ಮೋದಿ ಅವರ ಪ್ರಭೆಯಲ್ಲಿ ಕೆಲವರು ಗೆದ್ದಿದ್ದಾರೆ. ಆದರೆ ಅವರು ಕೆಲಸ ಮಾಡಲಿಲ್ಲ. ಬಿಜೆಪಿ ನಾಯಕರು ಹಳೆ ಕಾರ್ಯಕರ್ತರನ್ನು ಮರೆದು ಸೆಲ್ಫಿ ಪ್ರಿಯರನ್ನು ಅವಲಂಬಿಸಿದರು. ಸಾಮಾಜಿಕ ಜಾಲತಾಣಗಳ ಪೋಸ್ಟ್ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಕಾರ್ಯಕರ್ತರು ಓಣಿ ಓಣಿಗಳನ್ನು ಸುತ್ತಾಡಬೇಕು. ಬೀದಿಯಲ್ಲಿರುವ ಜನರ ಅಭಿಪ್ರಾಯಗಳನ್ನು ಸ್ವೀಕರಿಸಬೇಕು.
ಬಿಜೆಪಿ ಅಭ್ಯರ್ಥಿಗಳನ್ನು ಬದಲಾಯಿಸಿ ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಪರಿಣಾಮ ಬೀರಿತು. ಅಭ್ಯರ್ಥಿಗಳನ್ನು ಬದಲಾಯಿಸಿ ಸ್ಥಳೀಯ ನಾಯಕರಿಗಿಂತ ಪಕ್ಷಾಂತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಸೋಲಿಗೆ ಕಾರಣ. ಮೈತ್ರಿ ಮಾಡಿಕೊಂಡಿದ್ದೇವೆ ಎಂಬ ಕಾರಣ ಉತ್ತಮ ಅಭ್ಯರ್ಥಿಗೆ ಟಿಕೆಟ್ ನೀಡದೇ ಇರುವುದು ಸರಿಯಲ್ಲ.
ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣವು ಬಿಜೆಪಿಗೆ ಸೇರಿತು ಈ ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ಹೋರಾಡಿದ ಕಾರಣ ಬಿಜೆಪಿ ಬೆಂಬಲಿಗರು ಪಕ್ಷವನ್ನು ಬೆಂಬಲಿಸಲಿಲ್ಲ. ಒಂದೇ ಸ್ಟ್ರೋಕ್ನಲ್ಲಿ ಬಿಜೆಪಿಯ ಬ್ರ್ಯಾಂಡ್ ಮೌಲ್ಯ ಕಡಿಮೆಯಾಯಿತು ಎಂದು ಬರೆದಿದ್ದಾರೆ.
