ʼಪೋಸ್ಟ್ ತಿರುಚಿ ಪ್ರಚಾರʼ – ಅಮಳ ರಾಮಚಂದ್ರ ಆಕ್ರೋಶ

ಪುತ್ತೂರು: ಫೇಸ್ಬುಕ್ ಖಾತೆಯಲ್ಲಿಹಂಚಿಕೊಂಡ ವ್ಯಂಗ್ಯಚಿತ್ರಗಳನ್ನು ತಿರುಚುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ತೇಜೋವಧೆ ಮಾಡಿದ್ದಾರೆ ಎಂದು ಆಪಾದಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಮಳ ರಾಮಚಂದ್ರ ಅವರು ಪುತ್ತೂರು ನಗರ ಠಾಣೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಅವರ ವಿರುದ್ಧ ದೂರು ನೀಡಿದ್ದಾರೆ. ಅಮಳ ರಾಮಚಂದ್ರ ಅವರ ವಿರುದ್ಧ ಬಿಜೆಪಿ ಮುಖಂಡರು ದೂರು ನೀಡಿದ ಬಳಿಕ ಈ ವಿದ್ಯಮಾನ ನಡೆದಿದೆ.
ಮೇ 13ರಂದು ನಾನು ನನ್ನ ಫೇಸ್ಬುಕ್ ಖಾತೆಯಲ್ಲಿ ಕೆಲವು ವ್ಯಂಗ್ಯಚಿತ್ರಗಳನ್ನು ಹಂಚಿಕೊಂಡಿದ್ದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ನನ್ನು ಉದ್ದೇಶಿಸಿ ದೇಶದ ಸಹೋದರತೆಗೆ – ಸಾರ್ವಭೌಮತೆಗೆ ಕಾರ್ಕೋಟಕ ವಿಷ ! ಎಂಬ ವಾಕ್ಯದೊಂದಿಗೆ ಇವರು ವಿಶ್ವಗುರುವಲ್ಲ, ವಿಷಗುರು ! ಎಂಬ ಬರಹವಿರುವ ಪೋಸ್ಟ್ನ್ನು ಹಂಚಿಕೊಂಡಿದ್ದೆ. ಈ ಪೋಸ್ಟ್ಗಳು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನ ಎಂದು ಪುತ್ತೂರು ಬಿಜೆಪಿ ಅಧ್ಯಕ್ಷರು ನನ್ನ ಮೇಲೆ ಠಾಣೆಯಲ್ಲಿ ದೂರು ನೀಡಿದ್ದಾರೆ ಮತ್ತು ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾನು ನನ್ನ ಪೇಸ್ ಬುಕ್ ಪೋಸ್ಟ್ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ. ಅದು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ನನ್ನು ದೃಷ್ಠಿಯಲ್ಲಿಟ್ಟುಕೊಂಡು ಹಾಕಿದ ಪೋಸ್ಟ್ ಆಗಿರುತ್ತದೆ. ಆದರೆ ಇದು ಭಾರತದ ಪ್ರಧಾನಿಯವರನ್ನು ಉದ್ದೇಶಿಸಿ ಹಾಕಿದ್ದೆಂದು ತಿರುಚಿ ನನ್ನ ವಿರುದ್ಧ ಪ್ರಚಾರ ಮಾಡಲಾಗಿದೆ.
ಸಂಚು ನಡೆಸಿ ನಮ್ಮ ದೇಶದ ಪ್ರಧಾನಿಯವರನ್ನು ಅವಮಾನಿಸಿದ್ದಾರೆ ಹಾಗೂ ನಮ್ಮಿಬ್ಬರ ಘನತೆಗೆ ಕುಂದು ತಂದಿದ್ದಾರೆ. ನನ್ನ ಮತ್ತು ದೇಶದ ಪ್ರಧಾನ ಮಂತ್ರಿಗಳ ಅವಹೇಳನ ಮಾಡಿದ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ.ಬಿ. ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ಇತರರ ಮೇಲೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಡಿ ಉಪಸ್ಥಿತರಿದ್ದರು.